೧೮೬೩ನೇ ಇಸವಿ, ಜನವರಿ ೧೨ನೇ ತಾರೀಖಿನಂದು ಕಲ್ಕತ್ತದಲ್ಲಿ ವಿಶ್ವನಾಥ ದತ್ತ ಮತ್ತು ಭುವನೇಶ್ವರಿ ದೇವಿ ದಂಪತಿಗಳಿಗೆ ಜನಿಸಿದ ನರೇಂದ್ರನಾಥ ದತ್ತ ಮುಂದೆ ಸ್ವಾಮಿ ವಿವೇಕಾನಂದ ಎಂಬ ನಾಮಧೇಯದಿಂದ ಜಗದ್ವಿಖ್ಯಾತರಾದರು. ೧೯೦೨ ಜುಲೈ ೪ ರಂದು ದೈಹಿಕ ಶರೀರವನ್ನು ತೊರೆದ ಸ್ವಾಮಿ ವಿವೇಕಾನಂದರು ಅಂದು ಹಚ್ಚಿದ ವೇದಾಂತದ ದೀವಿಗೆಯು ಇಂದೂ ಕೂಡ ಜಗತ್ತಿಗೆ ಬೆಳಕು ಚೆಲ್ಲುತ್ತಿದೆ. ತನ್ನ ಗುರು ಶ್ರೀ ರಾಮಕೃಷ್ಣರ ಸಂದೇಶಗಳಿಗೆ ದನಿಯಾದ ವಿವೇಕಾನಂದರು ಶತಮಾನದ ನಂತರವೂ ತರುಣರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

ಈ ಲೇಖನದಲ್ಲಿ ಸದ್ಗುರುಗಳು ಸ್ವಾಮಿ ವಿವೇಕಾನಂದರ ಜೀವನದ ಕೆಲವೊಂದು ಘಟನೆಗಳು, ಗುರು ಶಿಷ್ಯರ ಸಂಬಂಧ ಮತ್ತು ಶ್ರೀ ರಾಮಕೃಷ್ಣರ ಸಂದೇಶದ ಪ್ರಸಾರದ ಕುರಿತಾಗಿ ಚರ್ಚಿಸಿದ್ದಾರೆ.

ಸ್ವಾಮಿ ವಿವೇಕಾನಂದ ಮತ್ತು ಕಾಳಿ

ಶ್ರೀ ರಾಮಕೃಷ್ಣರ ಸಾಕ್ಷಾತ್ಕಾರದ ನಂತರ ಹಲವು ಮಂದಿ ಶಿಷ್ಯರು ಅವರನ್ನು ಅನುಸರಿಸಿದರು. ಅವರಲ್ಲೊಬ್ಬರು ಸ್ವಾಮಿ ವಿವೇಕಾನಂದರು. ಯುನೈಟಡ್ ಸ್ಟೇಟ್ಸ್ ನ ಶಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ಮೊಟ್ಟ ಮೊದಲ ಯೋಗಿ ವಿವೇಕಾನಂದರು, ಆ ಮೂಲಕ ಅಧ್ಯಾತ್ಮಿಕ ಅಲೆಯನ್ನೇ ಎಬ್ಬಿಸಿದರು. ನವ್ಯ ವಿಚಾರಗಳ ಕುರಿತು ಜನರಲ್ಲಿದ್ದ ವಿರೋಧ ಭಾವನೆಗಳನ್ನು ಸ್ವಲ್ಪ ಮಟ್ಟಿಗೆ ನಿವಾರಿಸುವಲ್ಲಿ ಸಫಲರಾದರು.

ಸ್ವಾಮಿ ವಿವೇಕಾನಂದರು ಶ್ರೀ ರಾಮಕೃಷ್ಣರ ಬಳಿಗೆ ಬಂದು ಕೇಳುತ್ತಾರೆ. "ನೀವು ಯಾವಾಗಲೂ ದೇವರು, ದೇವರು ಎನ್ನುತ್ತೀರಿ. ಎಲ್ಲಿದೆ ಪುರಾವೆ? ನನಗೆ ಪುರಾವೆ ಬೇಕು"

ರಾಮಕೃಷ್ಣರಿಗೆ ವಿವೇಕಾನಂದರ ಮೇಲಿದ್ದ ಪ್ರೇಮವೇ ವಿಶಿಷ್ಟವಾದದ್ದು. ಸ್ವತಃ ತಾನು ತಲುಪಿಸಲು ಅಸಾಧ್ಯವಾದ ತನ್ನ ಸಂದೇಶಗಳನ್ನು ಜಗತ್ತಿಗೆ ತಲುಪಿಸಬಲ್ಲ ಸೂಕ್ತವಾದ ವ್ಯಕ್ತಿಯೇ ವಿವೇಕಾನಂದ ಎಂಬ ಸಂಪೂರ್ಣ ಅರಿವು ಅವರಿಗಿತ್ತು. 

ಅವರ ಸುತ್ತಲಿದ್ದ ಅನೇಕರಿಗೆ ರಾಮಕೃಷ್ಣರ ಈ ಹುಚ್ಚು ಮೋಹ ವಿಚಿತ್ರವೆನಿಸುತ್ತಿತ್ತು. ವಿವೇಕಾನಂದರು ಗುರುವನ್ನು ನೋಡಲು ಒಂದು ದಿನ ಬರದಿದ್ದರೂ, ಸ್ವತಃ ತಾವೇ ಶಿಷ್ಯನನ್ನರಸಿ ಹೋಗುತ್ತಿದ್ದರು. ಯಾಕೆಂದರೆ ತಮ್ಮ ಸಂದೇಶವನ್ನು ಲೋಕದಲ್ಲಿ ಪ್ರಸರಿಸಲು ಅಗತ್ಯವಾದ ಗ್ರಹಿಕಾಸಾಮರ್ಥ್ಯವು ಈ ಯುವಕನಲ್ಲಿದೆ ಎಂದು ಅವರು ತಿಳಿದಿದ್ದರು. ಸ್ವತಃ ವಿವೇಕಾನಂದರೂ ರಾಮಕೃಷ್ಣರ ಕುರಿತು ಅಷ್ಟೇ ಆಕರ್ಷಿತರಾಗಿದ್ದರು. ತನ್ನ ವಯಸ್ಸಿನ ಇತರ ಯುವಕರಂತೆ ಉದ್ಯೋಗ ಅಥವಾ ಆಕರ್ಷಣೆ ಇತ್ಯಾದಿಗಳೆಡೆಗೆ ಸಾಗದೇ ಸದಾ ರಾಮಕೃಷ್ಣರನ್ನೇ ಅನುಸರಿಸಿ ಹೋಗುತ್ತಿದ್ದರು.

ವಿವೇಕಾನಂದರ ಜೀವನದಲ್ಲಿ ನಡೆದ ಒಂದು ಆಶ್ಚರ್ಯಕರವಾದ ಘಟನೆಯಿದೆ. ಅವರ ತಾಯಿ ತೀವ್ರವಾದ ಖಾಯಿಲೆಯಿಂದ ಮರಣಶಯ್ಯೆಯಲ್ಲಿದ್ದರು. ವಿವೇಕಾನಂದರಿಗೆ ತಮ್ಮ ಬಳಿ ತಾಯಿಗೆ ಅಗತ್ಯವಾದ ಆಹಾರ, ಔಷಧೋಪಚಾರಗಳಿಗೆ ಹಣವಿಲ್ಲವೆಂಬ ಅರಿವಾಯಿತು. ತಾಯಿಯನ್ನು ಸೂಕ್ತವಾಗಿ ಉಪಚರಿಸಲಾಗದ ತನ್ನ ಸ್ಥಿತಿಯ ಬಗ್ಗೆ ಅವರಿಗೆ ಬಹಳ ಕೋಪವುಂಟಾಯಿತು. ವಿವೇಕಾನಂದರಂಥವರ ಕೋಪವೆಂದರೆ ಅದು ತೀವ್ರವಾದ ಕೋಪ. ಸೀದಾ ರಾಮಕೃಷ್ಣರ ಬಳಿಗೆ ಹೋದರು - ಹೋಗಲು ಬೇರೆ ಜಾಗವೂ ಇರಲಿಲ್ಲ, ಕೋಪ ಬಂದಾಗಲೂ ಅವರು ಹೋಗುತ್ತಿದ್ದುದು ಅಲ್ಲಿಗೇ.

ಹೋಗಿ ರಾಮಕೃಷ್ಣರಿಗೆ ಹೇಳಿದರು "ಅಧ್ಯಾತ್ಮವಂತೆ, ಸಾಕ್ಷಾತ್ಕಾರವಂತೆ! ಈ ಅಸಂಬದ್ಧ ನನ್ನನ್ನು ಎಲ್ಲಿಗೆ ಒಯ್ಯುತ್ತಿದೆ? ಉದ್ಯೋಗಕ್ಕೆ ಸೇರಿ, ನನ್ನ ಕರ್ತವ್ಯ ನಿರ್ವಹಿಸಿದ್ದರೆ, ಇಂದು ನಾನು ನನ್ನ ತಾಯಿಯನ್ನು ಸೂಕ್ತವಾಗಿ ನೋಡಿಕೊಳ್ಳಬಹುದಿತ್ತು. ಅವಳಿಗೆ ಬೇಕಾದ ಆಹಾರ, ಔಷಧ, ಉಪಚಾರ ಎಲ್ಲವನ್ನೂ ನೀಡಬಹುದಿತ್ತು. ಈ ಅಧ್ಯಾತ್ಮ ನನ್ನನ್ನು ಯಾವ ಸ್ಥಿತಿಗೆ ತಂದಿದೆ ನೋಡಿ"

ರಾಮಕೃಷ್ಣರು ಕಾಳಿಕಾದೇವಿಯ ಭಕ್ತರಾಗಿದ್ದು, ಅವರ ಮನೆಯಲ್ಲಿಯೇ ದೇವಿಯ ಗುಡಿಯಿತ್ತು. ಅವರೆಂದರು " ಓಹ್! ನಿಮ್ಮ ತಾಯಿಯವರಿಗೆ ಆಹಾರ ಮತ್ತು ಔಷಧದ ಅಗತ್ಯವಿದೆಯೆ? ಹಾಗಿದ್ದರೆ ನೀನೇಕೆ ಈ ತಾಯಿಯ ಬಳಿ ಹೋಗಿ ಬೇಡಬಾರದು?"

ವಿವೇಕಾನಂದರಿಗೆ ಅದು ಒಳ್ಳೆಯ ಸಲಹೆಯೆಂದು ತೋರಿತು. ಸೀದಾ ಕಾಳಿಕಾಮಾತೆಯ ಬಳಿ ಹೋದರು. ಒಂದು ಗಂಟೆಯ ನಂತರ ಗುರುವಿನ ಬಳಿ ಮರಳಿದಾಗ ಗುರು ಪ್ರಶ್ನಿಸುತ್ತಾರೆ. "ನಿಮ್ಮ ತಾಯಿಗೆ ಬೇಕಾದ ಆಹಾರ, ಔಷಧಿ ಇತ್ಯಾದಿಗಳನ್ನು ದೇವಿಯ ಬಳಿ ಕೇಳಿಕೊಂಡೆಯಾ?"

"ಇಲ್ಲ. ಮರೆತುಬಿಟ್ಟೆ" ವಿವೇಕಾನಂದರ ಉತ್ತರ.

ಗುರುವೆನ್ನುತ್ತಾರೆ "ಹೋಗು, ಮತ್ತೆ ಪ್ರಾರ್ಥಿಸು."

ಮತ್ತೆ ನಾಲ್ಕು ಗಂಟೆಗಳ ಬಳಿಕ ಬಂದಾಗಲೂ ಅದೇ ಉತ್ತರ ದೊರೆಯುತ್ತದೆ. ಪುನಃ ದೇವಿಯಲ್ಲಿಗೆ ಬೇಡಲು ಕಳಿಸುತ್ತಾರೆ "ಮತ್ತೆ ಹೋಗು, ಈ ಬಾರಿ ಮರೆಯಬೇಡ".
ಈ ಬಾರಿ ಎಂಟು ಗಂಟೆಗಳ ನಂತರ ಹೊರಗೆ ಬಂದ ವಿವೇಕಾನಂದರೆನ್ನುತ್ತಾರೆ. "ಇಲ್ಲ. ದೇವಿಯನ್ನು ನಾನೇನೂ ಕೇಳುವುದಿಲ್ಲ. ಕೇಳಬೇಕಾಗಿಯೂ ಇಲ್ಲ."

ರಾಮಕೃಷ್ಣರೆನ್ನುತ್ತಾರೆ. "ಒಳ್ಳೆಯದು, ನೀನು ಜಗನ್ಮಾತೆಯ ಬಳಿ ಕೋರಿಕೆಗಳನ್ನಿಟ್ಟಿದ್ದರೆ ನನ್ನ ನಿನ್ನ ಸಂಬಂಧ ಇಂದಿಗೇ ಕೊನೆಗಾಣುತ್ತಿತ್ತು. ನಾನು ಪುನಃ ನಿನ್ನನ್ನು ನೋಡುತ್ತಿರಲಿಲ್ಲ. ಬೇಕು ಬೇಕು ಎಂದೆನ್ನುವವನು ಜೀವನದ ಮೂಲಭೂತ ಸತ್ಯವನ್ನು ಅರಿಯದ ಮೂರ್ಖನೇ ಸರಿ.

ಪ್ರಾರ್ಥನಾಭಾವನೆಯು ಒಂದು ವಿಶಿಷ್ಟವಾದ ಗುಣ. ಸ್ವಭಾವತಃ ಪ್ರಾರ್ಥನಾಪೂರ್ಣರಾಗಿರುವುದು, ಆರಾಧನಾಪೂರ್ಣರಾಗಿರುವುದು ಜೀವಿಸಲು ಒಂದು ಸುಂದರವಾದ ರೀತಿ. ಆದರೆ ಏನೋ ಒಂದು ಬೇಕು ಎಂದು ನಿರೀಕ್ಷೆಯನ್ನಿಟ್ಟುಕೊಂಡು ಪ್ರಾರ್ಥಿಸಿದರೆ ಅದು ನಿಮ್ಮನ್ನು ಗುರಿ ಮುಟ್ಟಿಸಲಾರದು.

ದೇವರ ಅಸ್ತಿತ್ವದ ಪುರಾವೆಗಳು

ಕೇವಲ ೧೯ ವರ್ಷವಾಗಿದ್ದಾಗಲೇ ವಿವೇಕಾನಂದರು ಬಹಳ ತಾರ್ಕಿಕ, ತೀಕ್ಷ್ಣಮತ್ತೆಯ ಮತ್ತು ಕ್ಷಾತ್ರತೇಜದ ಯುವಕ. ಪ್ರತಿಯೊಂದಕ್ಕೂ ತಾರ್ಕಿಕ ಉತ್ತರ ನಿರೀಕ್ಷಿಸುವ ಹುಮ್ಮಸ್ಸು. "ದೇವರು, ದೇವರು, ಎಂದು ಹೇಳುತ್ತೀರಲ್ಲಾ, ಎಲ್ಲಿದ್ದಾನೆ ದೇವರು? ನನಗೆ ಪುರಾವೆ ಬೇಕು. ತೋರಿಸಿ" ಎಂದು ರಾಮಕೃಷ್ಣರನ್ನು ಕೇಳಿದರು.

ರಾಮಕೃಷ್ಣ ಪರಮಹಂಸರು ಸರಳವಾದ ವ್ಯಕ್ತಿ. ವಿದ್ಯಾವಂತರಲ್ಲ. ಸಾಕ್ಷಾತ್ಕಾರ ಪಡೆದಿದ್ದ ಅತೀಂದ್ರಿಯ ವ್ಯಕ್ತಿ. ಆದರೆ ಪಂಡಿತರಲ್ಲ. ಹಾಗಾಗಿ ಸರಳವಾಗೆಂದರು. "ನಾನೇ ಪುರಾವೆ. ದೇವರಿದ್ದಾನೆ ಎಂಬುದಕ್ಕೆ ನಾನೇ ಸಾಕ್ಷಿ."

ರಾಮಕೃಷ್ಣರು ಹೇಳಿದರು, “ದೇವರಿದ್ದಾನೆ ಎಂಬುದಕ್ಕೆ ನಾನೇ ಸಾಕ್ಷಿ.”

ವಿವೇಕಾನಂದರಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಗೊಂದಲಗೊಂಡರು. ನಿರೀಕ್ಷಿಸಿದ್ದು ವಿದ್ವತ್ಪೂರ್ಣವಾದ ಉತ್ತರವನ್ನು - "ದೇವರಿದ್ದಾನೆ ಎಂಬುದಕ್ಕೆ ಬೀಜ ಮೊಳಕೆಯೊಡೆಯುವುದೇ ಸಾಕ್ಷಿ. ಸೌರಮಂಡಲದ ಚಲನೆಯೇ ಸಾಕ್ಷಿ" ಇಂತಹವುಗಳನ್ನು. ಆದರೆ ಗುರುವಿನಿಂದ ಬಂದ ಉತ್ತರಕ್ಕೆ ನಿರುತ್ತರನಾದ ವಿವೇಕಾನಂದ ಅಲ್ಲಿಂದ ನಿರ್ಗಮಿಸಿದ.

ಮೂರು ದಿನಗಳ ನಂತರ ಪುನಃ ಗುರುವನ್ನು ಕೇಳುತ್ತಾನೆ. " ಸರಿ ಹಾಗಿದ್ದರೆ ನನಗೆ ದೇವರನ್ನು ತೋರಿಸಿ."

"ನಿನಗೆ ನೋಡುವ ಧೈರ್ಯವಿದೆಯೆ?" ಗುರುವಿನ ಪ್ರಶ್ನೆ.

"ಇದೆ" ಕೆಚ್ಚೆದೆಯ ಯುವಕನ ಉತ್ತರ. ಅವನ ಪ್ರಶ್ನೆಯು ಹುಟ್ಟಿಸಿದ ತಳಮಳ ಅವನೊಳಗೆ ಕುದಿಯುತ್ತಿತ್ತು.

ರಾಮಕೃಷ್ಣರು ತಮ್ಮ ಪಾದವನ್ನೆತ್ತಿ ವಿವೇಕಾನಂದರ ಎದೆಯ ಮೇಲಿಡುತ್ತಾರೆ. ಅಷ್ಟೇ! ದೇಹ, ಮನಸ್ಸಿನ ಪರಿಧಿಯಾಚೆಗಿನ ಸಮಾಧಿಸ್ಥಿತಿಗೆ ಹೋದ ವಿವೇಕಾನಂದರು ಅದರಿಂದ ಬಾಹ್ಯಲೋಕಕ್ಕೆ ಮರಳಿದ್ದು ಬರೋಬ್ಬರಿ ಹನ್ನೆರಡು ತಾಸುಗಳ ನಂತರವೇ. ಮತ್ತೆ ಅವರೆಂದೂ ಹಳೆಯ ನರೇಂದ್ರನಾಗಿ ಉಳಿಯಲಿಲ್ಲ. ತಮ್ಮ ಜೀವಮಾನದಲ್ಲಿ ಮತ್ತೆಂದೂ ರಾಮಕೃಷ್ಣರನ್ನು ಪ್ರಶ್ನೆ ಮಾಡಲಿಲ್ಲ.

ಶಾರದಾಮಾತೆಯ ಆಶೀರ್ವಾದ

ನೀವು ಭಕ್ತಿನಿಷ್ಠರಾಗದ ಹೊರತು ಜೀವನದ ರಹಸ್ಯ ನಿಮಗರಿವಾಗುವುದಿಲ್ಲ. ಹಾಗೇನಾದರೂ ಆದರೆ ನೀವೂ ಹಾನಿಗೊಳಗಾಗುವಿರಲ್ಲದೆ, ಬೇರೆಯವರಿಗೂ ಹಾನಿಯುಂಟುಮಾಡಬಲ್ಲಿರಿ. ಭಕ್ತಿಯನ್ನು ಅರಿಯದವರಿಗೆ ಭಾರತದಲ್ಲಿ ಜ್ಞಾನವನ್ನು ಎಂದೂ ಧಾರೆಯೆರಯಲಾಗುತ್ತಿರಲಿಲ್ಲ.

ಸ್ವಾಮಿ ವಿವೇಕಾನಂದರ ಜೀವನದಲ್ಲೊಂದು ಸುಂದರವಾದ ಘಟನೆಯಿದೆ. ರಾಮಕೃಷ್ಣ  ಪರಮಹಂಸರ ದೇಹಾಂತ್ಯವಾದ ನಂತರ ವಿವೇಕಾನಂದರು ಒಂದಿಷ್ಟು ಯುವಕರ ಗುಂಪಿನೊಡನೆ ನವಭಾರತ ನಿರ್ಮಾಣಕ್ಕಾಗಿ ಪ್ರಯತ್ನಿಸುತ್ತಾ ದೇಶದುದ್ದಕ್ಕೂ ಪ್ರವಾಸ ಮಾಡತೊಡಗುತ್ತಾರೆ. ಆಗ ಯಾರೋ ಕೆಲವರು, ಯುನೈಟೆಡ್ ಸ್ಟೇಟ್ಸ್ ನ ಶಿಕಾಗೋದಲ್ಲಿ ನಡೆಯಲಿರುವ ಸರ್ವ ಧರ್ಮಸಮ್ಮೇಳನದ ಕುರಿತು ತಿಳಿಸಿ ಅಲ್ಲಿಗೆ ಹೋಗಿ ತಮ್ಮ ಚಿಂತನೆಗಳನ್ನು ಮಂಡಿಸಬಹುದೆಂದು ಸಲಹೆ ಕೊಟ್ಟರು. ಯಾಕೆಂದರೆ ಇಲ್ಲಿ ವಿವೇಕಾನಂದರ ಮಾತುಗಳಿಗೆ ಯಾರೂ ಕಿವಿಗೊಡುತ್ತಿರಲಿಲ್ಲ. ತರುಣನೊಬ್ಬ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸದ ಗಂಭೀರ ವಿಷಯಗಳನ್ನು ಜನರಿಗೆ ತಲುಪಿಸಲು ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದರೆ ಅದನ್ನು ಯಾರು ಕೇಳುತ್ತಾರೆ? ಹಾಗಾಗಿ ಅವರು ಸೂಚಿಸಿದರು "ನೀವು ಶಿಕಾಗೋಗೆ ಹೋಗಿ. ಅಲ್ಲಿ ನಿಮ್ಮ ವಿಚಾರಗಳಿಂದ ಅಲೆಯೆಬ್ಬಿಸಿ. ಅಲ್ಲಿ ಎದ್ದ ಅಲೆಯಿಂದಾಗಿ ಇಲ್ಲಿಯೂ ಎಲ್ಲರೂ ನಿಮ್ಮೆಡೆಗೆ ಗಮನ ಹರಿಸುವರು"

ಶ್ರೀ ರಾಮಕೃಷ್ಣ ಪರಮಹಂಸರ ವಾಣಿಗಳನ್ನು ಜಗತ್ತಿಗೆ ಪರಿಚಯಿಸಲು ಪಶ್ಚಿಮಕ್ಕೆ ಪ್ರಯಾಣಿಸುವ ಮುನ್ನ ವಿವೇಕಾನಂದರು ಶ್ರೀ ಶಾರದಾ ದೇವಿಯಲ್ಲಿಗೆ ಹೋಗಿ ಆಶೀರ್ವಾದ ಬೇಡುತ್ತಾರೆ. ಆ ಸಮಯದಲ್ಲಿ ಶಾರದಾದೇವಿ ಹಾಡೊಂದನ್ನು ಹಾಡುತ್ತಾ ಅಡಿಗೆಯಲ್ಲಿ ತೊಡಗಿರುತ್ತಾರೆ. ಭಾರತದಲ್ಲಿ ಅಡುಗೆ ಮಾಡುವಾಗ ಹಾಡುಗಳನ್ನು, ಸ್ತೋತ್ರಗಳನ್ನು ಹಾಡುತ್ತಾ ಮಾಡುವುದು ಬಹಳ ಸಾಮಾನ್ಯವಾದ ವಿಷಯ. ಈಗ ಆ ಕೆಲಸವನ್ನು ಐಪಾಡ್ ಗಳು ಮಾಡುತ್ತಿವೆ ಎನ್ನಿ. ಆದರೆ ಮೊದಲಿಗೆ ಅಡುಗೆಯೆಂದರೆ ತಾಯಿಯರಿಗೆ ಪೂಜೆಯಂತೆ, ವ್ರತದಂತೆ. ಪ್ರೇಮದಿಂದ ಅಡುಗೆ ಮಾಡಿ ಬಡಿಸಿದ್ದನ್ನು ಸಂತೃಪ್ತಿಯಿಂದ ತಿನ್ನುವುದನ್ನು ನೋಡುವುದೇ ಅವರಿಗೆ ಪರಮ ಸಂತೋಷ. ಅಡುಗೆಯೆನ್ನುವುದು ಬಹಳ ವಿವರವಾಗಿ ನಡೆಯುವ ಸಂತೋಷದ ಕ್ರಿಯೆಯಾಗಿತ್ತು. ಇಪ್ಪತ್ತು-ಮೂವತ್ತು ನಿಮಿಷದ ಭೋಜನಕ್ಕಾಗಿ ಕಡಿಮೆಯೆಂದರೂ ೩-೪ ಗಂಟೆಗಳ ಕಾಲ ಶ್ರದ್ದೆಯಿಂದ ಅಡುಗೆ ತಯಾರಿಸುತ್ತಿದ್ದರು. ಮತ್ತು ಪೂರ್ತಿ ಸಮಯ ಹಾಡು, ದೇವರ ನಾಮ ಮುಂತಾದವುಗಳನ್ನು ಹಾಡುತ್ತಲೇ ಅಡುಗೆ ಮಾಡುತ್ತಿದ್ದರು. ನನ್ನ ತಾಯಿಯಂತೂ ಯಾವಾಗಲೂ ಹಾಡಿಕೊಳ್ಳುತ್ತಿದ್ದರು.

ಸ್ವಾಮಿ ವಿವೇಕಾನಂದ-ಧರ್ಮ ಸಮ್ಮೇಳನ- ಶಿಕಾಗೋ. ೧೮೯೩.

"ನಾನು ಗುರುಗಳ ಸಂದೇಶಗಳನ್ನು ಜಗತ್ತಿಗೆ ತಲುಪಿಸಲು ಯುನೈಟೆಡ್ ಸ್ಟೇಟ್ಸ್ ಗೆ ಹೊರಡಲು ಸಿದ್ಧನಾಗಿದ್ದೇನೆ."  ವಿವೇಕಾನಂದರ ಮಾತಿಗೆ ಮಾತೆ ಶಾರದಾದೇವಿ ಏನೂ ಉತ್ತರಿಸುವುದಿಲ್ಲ. ಇದ್ದಕ್ಕಿದ್ದಂತೆ "ನರೇನ್, ಆ ಚಾಕುವನ್ನಿತ್ತ ಕೊಡು" ಎಂದು ತೋರಿಸುತ್ತಾರೆ. ವಿವೇಕಾನಂದರು ನಮ್ರತೆಯಿಂದ ಚಾಕುವನ್ನೆತ್ತಿಕೊಂಡು ಶಾರದಾದೇವಿಗೆ ನೀಡುತ್ತಾರೆ. ನಂತರ ಆಕೆ "ನಿನಗೆ ನನ್ನ ಆಶೀರ್ವಾದವಿದೆ. ಹೋಗಿ ಬಾ." ಎನ್ನುತ್ತಾರೆ. "ನೀವೇಕೆ ಆಶೀರ್ವದಿಸಲು ಇಷ್ಟು ಸಮಯ ತೆಗೆದುಕೊಂಡಿರಿ? ಅಲ್ಲದೇ ನಿಮ್ಮ ಅಡುಗೆಗೆ ಬೇಕಾದ ತರಕಾರಿ ಕತ್ತರಿಸಿಯಾಗಿದೆ. ಆದರೂ ಚಾಕುವನ್ನೇಕೆ ನನ್ನಿಂದ ತೆಗೆದುಕೊಂಡಿರಿ?" ವಿವೇಕಾನಂದರು ಕೇಳುತ್ತಾರೆ.

ಶಾರದಾದೇವಿ ಉತ್ತರಿಸುತ್ತಾರೆ " ಗುರುಗಳು ಹೋದ ನಂತರ ನೀನು ಹೇಗಿದ್ದೀ ಎಂದು ನನಗೆ ತಿಳಿಯಬೇಕಾಗಿತ್ತು. ಈಗ ನೀನು ಚೂರಿಯನ್ನು ನನ್ನ ಕೈಗಿಡುವ ಈ ಒಂದು ರೀತಿಯಲ್ಲೇ ನೀನು ಸಮರ್ಥನಿದ್ದೀಯೆ, ಗುರುಗಳ ಸಂದೇಶಗಳನ್ನು ಸಮರ್ಥವಾಗಿ ತಲುಪಿಸಬಲ್ಲೆ ಎಂದು ಸಿದ್ಧಪಡಿಸಿತು "

ಸ್ವಾಮಿ ವಿವೇಕಾನಂದ ಮತ್ತು ಶ್ರೀ ರಾಮಕೃಷ್ಣರ ಸಂದೇಶ

ಗುರುಗಳಲ್ಲಿ ಅನೇಕರು ತಮ್ಮಷ್ಟಕ್ಕೇ ಪ್ರಸಿದ್ದಿಗೆ ಬರಲಾರರು. ಜಗತ್ತಿನ ಆಗುಹೋಗುಗಳ ಕುರಿತಾಗಿ ಅಷ್ಟಾಗಿ ಪ್ರಾಜ್ಞರಲ್ಲದ ಅಂತಹ ಗುರುಗಳ ಸಂದೇಶಗಳನ್ನು ಜನರತ್ತ ಕೊಂಡೊಯ್ಯಲು ಸಮರ್ಥ ಶಿಷ್ಯರ ಅವಶ್ಯಕತೆಯಿರುತ್ತದೆ. ಇಂದು ಎಲ್ಲರೂ ಶ್ರೀ ರಾಮಕೃಷ್ಣರ ಕುರಿತು ಮಾತನಾಡುತ್ತಾರೆ. ರಾಮಕೃಷ್ಣರು ಸ್ಫಟಿಕದಷ್ಟು ಸ್ಫುಟವಾದ ಜ್ಞಾನಿ. ಅವರೊಬ್ಬ ಅಪೂರ್ವ ಸಂಭವ. ಆದರೆ ಅದೇ ಸಮಯಕ್ಕೆ ಜಗತ್ತಿನ ಕಣ್ಣಲ್ಲಿ ಅವರು ನಿರಕ್ಷರ ಕುಕ್ಷಿ. ವಿವೇಕಾನಂದರ ಆಗಮನವಾಗದಿದ್ದರೆ ಅವರೆಲ್ಲೋ ’ವನಕುಸುಮ’ದಂತೆ ಅಜ್ಞಾತವಾಗಿ ಉಳಿದುಬಿಡುತ್ತಿದ್ದರೇನೋ. ಅಸಂಖ್ಯಾತ ಹೂವುಗಳರಳುತ್ತವೆ. ಎಷ್ಟು ತಾನೇ ಗುರುತಿಸಲ್ಪಡುತ್ತವೆ?

ಪ್ರಾರ್ಥನೆಯ ಕುರಿತು ವಿವೇಕಾನಂದರು

ಸ್ವಾಮಿ ವಿವೇಕಾನಂದರು ಒಂದು ಕಡೆಯಲ್ಲಿ ಹೇಳುತ್ತಾರೆ "ಯಾಂತ್ರಿಕತೆಯ ಪ್ರಾರ್ಥನೆಗಿಂತ ತಾದಾತ್ಮ್ಯತೆಯಿಂದ ಕಾಲ್ಚೆಂಡನ್ನು ಒದೆಯುವುದೇ ನಿಮ್ಮನ್ನು ದೈವೀಕತೆಯತ್ತ ಕೊಂಡೊಯ್ಯಬಲ್ಲದು"

ಇದು ನಿಜ. ಏಕೆಂದರೆ ಪೂರ್ತಿ ಚಿತ್ತೈಕಾಗ್ರತೆಯಿಲ್ಲದೇ ನೀವು ಚೆಂಡನ್ನು ಗುರಿಯತ್ತ ಕೊಂಡೊಯ್ಯಲಾರಿರಿ. ಇದರಲ್ಲಿ ವೈಯಕ್ತಿಕ ಉದ್ದೇಶವಿಲ್ಲ, ಕೇವಲ ಒಳಗೊಳ್ಳುವಿಕೆಯಿರುತ್ತದೆ. ನೀವೇನು ಮಾಡಬಲ್ಲಿರಿ, ಏನು ಮಾಡಲಾರಿರಿ ಎಂಬುದು ಮೊದಲೇ ನಿಗದಿತವಾಗಿರುತ್ತದೆ, ಮತ್ತು ನೀವು ಅನೇಕ ವರ್ಷಗಳ ತರಬೇತಿಯನ್ನು ಪಡೆದಿರುತ್ತೀರಿ. ಆಡುವ ಈ ಕ್ಷಣದಲ್ಲಿ ಬೇಕಿರುವುದು, ಕೇವಲ ಗಾಢವಾದ ಒಳಗೊಳ್ಳುವಿಕೆ ಮಾತ್ರವೇ, ಯಾವುದೇ ಉದ್ದೇಶವಲ್ಲ.

ಸ್ವಾಮಿ ವಿವೇಕಾನಂದರು ಹೇಳುತ್ತಾರೆ, "ಯಾಂತ್ರಿಕತೆಯ ಪ್ರಾರ್ಥನೆಗಿಂತ ತಾದಾತ್ಮ್ಯತೆಯಿಂದ ಕಾಲ್ಚೆಂಡನ್ನು ಒದೆಯುವುದೇ ನಿಮ್ಮನ್ನು ದೈವೀಕತೆಯತ್ತ ಕೊಂಡೊಯ್ಯಬಲ್ಲದು" 

ಹಾಗಾಗಿಯೇ ವಿವೇಕಾನಂದರು ಕಾಲ್ಚೆಂಡಾಟದ ಕುರಿತು ಮೇಲಿನಂತೆ ಹೇಳಿದ್ದು. ಪ್ರಾರ್ಥನೆ ಕ್ರಮೇಣ ಯಾಂತ್ರಿಕವಾಗಬಹುದು. ಅದರೊಂದಿಗೆ ಅನೇಕ ಇತರ ಸಂಗತಿಗಳನ್ನು ನೀವು ನಡೆಸುತ್ತಿರಬಹುದು. ನಮ್ಮ ದೇಶದಲ್ಲಿ ಪ್ರಾರ್ಥನೆಗಳು ಕೇವಲ ಶಾಬ್ದಿಕವಾಗಿರದೆ ಬಹಳ ಸಂಕೀರ್ಣವಾಗಿವೆ. ಯಾಂತ್ರಿಕ ಉಚ್ಛಾರಣೆಯ ಪ್ರಾರ್ಥನೆಗಳನ್ನು ನೋಡಿ ಮಂತ್ರೋಚ್ಚಾರಣೆಗಳನ್ನು, ಪೂಜಾ ಪದ್ಧತಿಗಳನ್ನು ಸಂಕೀರ್ಣವಾಗಿಸಲಾಯಿತು. ನೀವು ಪೂರ್ಣವಾಗಿ ನಿಮ್ಮನ್ನು ತೊಡಗಿಸಿಕೊಳ್ಳದೇ ಅವುಗಳನ್ನು ಮಾಡುವುದು ಅಸಾಧ್ಯ.

ಹಾಗಾಗಿ ನೀವು ಏಕಾಗ್ರತೆಯಿಲ್ಲದೇ ಅದನ್ನು ನೆರವೇರಿಸಿದರೆ ಅದು ಧರ್ಮದ್ರೋಹವಾದೀತು. ಪಾವಿತ್ರ್ಯ ಭಂಗವಾದೀತು. ಹಾಗೆಯೇ ಕಾಲ್ಚೆಂಡಾಟವು ನಿಮ್ಮಲ್ಲಿ ಆ ಹಂತದ ತೊಡಗಿಸಿಕೊಳ್ಳುವಿಕೆಯನ್ನು ಉಂಟುಮಾಡುತ್ತದೆ. ಆಟವಾಡುವಾಗ ಬೇರೇನನ್ನೂ ಮಾಡುವುದು ಅಸಾಧ್ಯ.

ಫುಟ್ಬಾಲ್ ಆಟದಲ್ಲಿ ನೀವು ನಿಮ್ಮ ಪಾದಗಳನ್ನು ಶಸ್ತ್ರಚಿಕಿತ್ಸಕನ (ಸರ್ಜನ್) ಬ್ಲೇಡ್ ನಂತೆ ಉಪಯೋಗಿಸಬೇಕಾದ ಅಗತ್ಯವಿದೆ. ನಿಮ್ಮ ಪಾದಗಳು ಚೆಂಡನ್ನು ನಿರ್ವಹಿಸುವ ಜೊತೆಗೇ ನಿಮ್ಮನ್ನೂ ಅತ್ತಿತ್ತ ಸಾಗಿಸುವ ಕಾರ್ಯವನ್ನು ಏಕಕಾಲಕ್ಕೆ ಮಾಡಬೇಕಾಗಿರುವುದರಿಂದ ಅದರಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ಅದೇ ಸಮಯಕ್ಕೆ ನಿಮ್ಮ ಗುರಿಯಿಂದ ನಿಮ್ಮನ್ನು ದೂರಮಾಡಲು ಕಾದಿರುವ ಉಳಿದ ಹತ್ತು ಜನರ ಅಡೆತಡೆಗಳನ್ನೂ ನಿವಾರಿಸಿಕೊಳ್ಳಬೇಕಾಗುತ್ತದೆ. ಜನರಿಂದ ನುಣುಚಿಕೊಳ್ಳಬೇಕು, ಚೆಂಡನ್ನು ನಿಮ್ಮ ಸುಪರ್ದಿಯಲ್ಲಿಟ್ಟುಕೊಳ್ಳಬೇಕು, ಓಡುತ್ತಲೂ ಇರಬೇಕು. ಅವೆಲ್ಲವನ್ನೂ ಆ ಗತಿಯಲ್ಲಿ ನಿರ್ವಹಿಸಲು ನಿಮ್ಮ ಪಾದಗಳು ಸರ್ಜನರ ಚೂರಿಯಂತೆ ಸಕ್ಷಮವಾಗಿರಬೇಕು. ಆ ವೇಗದಲ್ಲಿ, ಆ ಚಟುವಟಿಕೆಯ ಮಧ್ಯೆ ಚೆಂಡಿನ ಚಲನೆಯನ್ನು ನಿರ್ದೇಶಿಸಲು ಪ್ರಚಂಡ ಕೌಶಲದ ಅಗತ್ಯವಿದೆ. ಅಲ್ಲಿಯೇ ನಿಮ್ಮ ಸಂಪೂರ್ಣ ಒಳಗೊಳ್ಳುವಿಕೆಯ ಪರೀಕ್ಷೆ. ಅಲ್ಲಿ ನೀವು ಹೆಚ್ಚುಕಮ್ಮಿ ಮನೋರಹಿತವಾಗಿರುತ್ತೀರಿ.

ನೀವು ಯಾವುದರಲ್ಲಿಯೇ ಆಗಲಿ, ಸಂಪೂರ್ಣ ತೊಡಗಿಸಿಕೊಂಡಾಗ, ಅಲ್ಲಿ ಕೇವಲ ಕ್ರಿಯೆ ಜಾರಿಯಲ್ಲಿರುತ್ತದೆ. ಮನ ತಟಸ್ಥವಾಗಿರುತ್ತದೆ. ಹಾಗಾಗಿ ಫುಟ್ಬಾಲ್ ಪಂದ್ಯದಲ್ಲಿ ಆಟಗಾರರು ಅಂತಹ ಏಕಾಗ್ರತೆಯನ್ನು ತಲುಪುತ್ತಾರೆ. ಅದೇ ವೇಳೆಗೆ, ಪಂದ್ಯವನ್ನು ವೀಕ್ಷಿಸುವ ಜಗತ್ತಿನ ಅರ್ಧದಷ್ಟು ಮಂದಿ, ಅದೇ ತಾದಾತ್ಮ್ಯತೆಯನ್ನು ಅನುಭವಿಸುತ್ತಿರುತ್ತಾರೆ. ಅದು ಆಧ್ಯಾತ್ಮಿಕ ಅನುಭವವಲ್ಲದಿದ್ದರೂ ಒಂದು ರೀತಿಯ ಇಂದ್ರಿಯಾತೀತ ಅನುಭವವೇ. ಒಬ್ಬ ಆಟಗಾರನ ತಲ್ಲೀನತೆಯ ಕಿಡಿ ಪ್ರತಿ ವೀಕ್ಷಕರಲ್ಲೂ ಕಿಡಿಯನ್ನು ಹುಟ್ಟಿಸಬಲ್ಲದು.
 

ಮಹಿಳೆಯರ ಕುರಿತು ಸ್ವಾಮಿ ವಿವೇಕಾನಂದ

ಒಮ್ಮೆ, ಓರ್ವ ಸಮಾಜಸುಧಾರಕ, ವಿವೇಕಾನಂದರ ಬಳಿ ಬಂದು ಕೇಳುತ್ತಾನೆ "ನೀವು ಕೂಡ ಮಹಿಳೆಯರ ಏಳಿಗೆಯನ್ನು ಬೆಂಬಲಿಸುತ್ತೀರಿ. ನನಗೆ ಕೂಡ ಅದರಲ್ಲಿ ಆಸಕ್ತಿಯಿದೆ. ಮಹಿಳೆಯರ ಸುಧಾರಣೆಗಾಗಿ ನಾನೇನು ಮಾಡಲಿ? ಯಾವ ರೀತಿ ಬೆಂಬಲಿಸಲಿ?"

ವಿವೇಕಾನಂದರು ಉತ್ತರಿಸುತ್ತಾರೆ "ಅವರನ್ನು ಅವರಷ್ಟಕ್ಕೇ ಬಿಟ್ಟುಬಿಡಿ. ಅವರ ಸುಧಾರಣೆಗಾಗಿ ನೀವೇನೂ ಮಾಡಬೇಕಾಗಿಲ್ಲ. ಅವರ ಬೆಳವಣಿಗೆಯ ದಾರಿಗೆ ನೀವು ಅಡ್ಡ ಬರದಿದ್ದರೆ ಸುಧಾರಣೆ ತಾನಾಗಿಯೇ ಆಗುತ್ತದೆ."

ಇಷ್ಟೇ ಆಗಬೇಕಾಗಿರುವುದು. ಮಹಿಳೆಯರ ಸುಧಾರಣೆಗಾಗಿ ಪುರುಷರೇನೂ ಮಾಡಬೇಕಾಗಿಲ್ಲ. ನೀವು ಹಾಕಿರುವ ಬೇಲಿಗಳನ್ನು ನಿವಾರಿಸಿ. ಮಹಿಳೆ ಅಗತ್ಯತೆಗೆ ತಕ್ಕಂತೆ ತನ್ನಷ್ಟಕ್ಕೆ ತಾನೇ ಬೆಳೆಯುತ್ತಾಳೆ. 
 

ಸ್ವಾಮಿ ವಿವೇಕಾನಂದರ ದೂರದರ್ಶಿತ್ವ

https://twitter.com/SadhguruJV/status/686754245949837312 https://twitter.com/SadhguruJV/status/554487959320154113

ವಿವೇಕ ಎಂದರೆ ಜ್ಞಾನ - ಗ್ರಹಣಶಕ್ತಿ. ಜ್ಞಾನದಿಂದುಂಟಾಗುವ ಸಂತೋಷವೇ ಆನಂದ. ಅದೇ ವಿವೇಕಾನಂದ. ನಾವು ಗ್ರಹಿಸುವುದು ಮಾತ್ರವೇ ನಮ್ಮ ಪಾಲಿಗೆ ಅಸ್ತಿತ್ವದಲ್ಲಿದೆ.

ನನಗಾಗ ಹನ್ನೆರಡೋ ಹದಿಮೂರೋ ವರ್ಷ. ಆಗ ಸ್ವಾಮಿ ವಿವೇಕಾನಂದರ ಒಂದು ಲೇಖನವನ್ನು ಓದಿದೆ. ವಿವೇಕಾನಂದರು ಅದರಲ್ಲಿ ಹೇಳಿದ್ದಾರೆ "ನೂರು ಜನ ನಿಜವಾದ ಬದ್ಧತೆಯುಳ್ಳ ಯುವಕರನ್ನು ನನಗೆ ಕೊಡಿ. ನಾನು ಈ ದೇಶದ ಸಂಪೂರ್ಣ ಭಾಗ್ಯವನ್ನೇ ಬದಲಾಯಿಸುತ್ತೇನೆ" ಆಗ ಭಾರತದ ಜನಸಂಖ್ಯೆ ಇಪ್ಪತ್ತಮೂರು ಕೋಟಿ ಇದ್ದಿರಬಹುದು. ಆಷ್ಟು ಜನರಲ್ಲಿ ಅವರಿಗೆ ಕೇವಲ ನೂರು ಜನ ನಿಜವಾದ ಶ್ರದ್ಧಾವಂತ ಯುವಕರೂ ಸಿಗಲಿಲ್ಲ. ನಾನಂದುಕೊಂಡಿದ್ದೆ, "ಎಂಥ ದುರಂತ! ಸ್ವಾಮಿ ವಿವೇಕಾನಂದರಂತಹವರು ಮತ್ತೆ ಮತ್ತೆ ಹುಟ್ಟಲಾರರು. ಅವರ ಜನ್ಮ ನಿಜವಾಗಲೂ ಲೋಕೋತ್ತರವಾದ ಅದ್ಭುತ! ಅಂತಹ ಅಸಾಧಾರಣ ವ್ಯಕ್ತಿಗೆ ಈ ವಿಶಾಲ ದೇಶದಲ್ಲಿ ನಾವು ನೂರು ಯುವಕರನ್ನು ಒದಗಿಸಲಾಗಲಿಲ್ಲ" ಇದು ನಮ್ಮ ದೇಶಕ್ಕೆ, ನಮ್ಮ ಸಂಸ್ಕೃತಿಗೆ ದೊಡ್ಡ ದುರಂತದ ವಿಷಯದಂತೆ ನನಗೆ ತೋರಿತು.

ಒಬ್ಬ ವ್ಯಕ್ತಿಗೆ ಅಸಾಧಾರಣ ಪ್ರಜ್ಞೆಯಿತ್ತು, ಮತ್ತು ಆ ಒಬ್ಬ ವ್ಯಕ್ತಿಯ ದೂರದೃಷ್ಟಿ ಎಷ್ಟೋ ಅಸಾಧ್ಯತೆಗಳನ್ನು ಸಾಧ್ಯಗೊಳಿಸಿದೆ. ಈಗಲೂ, ಅವರ ಹೆಸರಿನ ಬಲವು ಮಾನವ ಕುಲದ ಒಳಿತಿಗಾಗಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿಸುತ್ತಿದೆ. ಅವರ ಕಾಣ್ಕೆಯಿಂದಲೇ ಬಹಳಷ್ಟು ಉತ್ತಮ ಕಾರ್ಯಗಳು ಕಾರ್ಯಗತವಾಗಿವೆ. ಅವರೊಂದಿಗೆ ಇದ್ದವರು, ಅವರ ಸಮಕಾಲೀನರೆತ್ತ ಹೋದರು? ಅವರು ಮಾತ್ರ ತಮ್ಮ ಸಾಧನೆಗಳಿಂದ ಇಂದಿಗೂ ಸಾವಿರಾರು ಜೀವಗಳಿಗೆ ಪ್ರೇರಣಾಶಕ್ತಿಯಾಗಿದ್ದಾರೆ. ಸಾವಿರಾರು ಜನ ಇಂಥ ದೃಷ್ಟಿಯುಳ್ಳವರಾದರೆ ಎಷ್ಟೊಂದು ಸುಧಾರಣೆಯಾಗಬಹುದಿತ್ತು? 

ಒಬ್ಬ ಗೌತಮ ಬುದ್ಧ, ಒಬ್ಬ ವಿವೇಕಾನಂದರ ಕಾಣ್ಕೆ ಸಾಲದು. ಜನಸಂಖ್ಯೆಯ ಒಂದು ದೊಡ್ಡ ಭಾಗವೇ ಇಂಥ ದೃಷ್ಟಿಯುಳ್ಳವರಾದರೆ, ಜಗತ್ತು, ಸಮಾಜ ಎಷ್ಟೊಂದು ಸುಂದರವಾಗಬಲ್ಲದು.

Image courtesy: Swami Vivekananda from Wikipedia
Ramakrishna from Wikipedia
Swami Vivekananda at Parliament of Religions from Wikipedia