ಗೆಲುವೆಂಬುದು ಬಯಸಿದುದನ್ನು ಗಳಿಸುವುದು ತಾನೆ! ಬಯಸಿದುದನ್ನು ಗಳಿಸಲು ಮೂಲ ಆಕರ್ಷಣೆ ಆನಂದವಾಗಿರುವುದು. ಆನಂದವಾಗಿರುವುದರಲ್ಲಿಯೇ ನಿಮ್ಮ ಸಂಪೂರ್ಣ ಶಕ್ತಿ ತಲ್ಲೀನವಾಗಿರುತ್ತದೆ.

ನೀವು ಆನಂದವಾಗಿರಬೇಕಾದರೆ ಅದಕ್ಕಾರು ಹೊಣೆ? ನೀವು ಬಯಸುವುದೆಲ್ಲವನ್ನೂ ಆನಂದವಾಗಿ ಪಡೆಯುವ ಮಾರ್ಗ ಯಾವುದು?

ಒಂದೊಂದಾಗಿ ನೋಡೋಣ.

ಸಂಜೆಯ ಸಮಯ. ಬೆಟ್ಟದ ಹಿನ್ನೆಲೆಯಲ್ಲಿ ಸೂರ್ಯ ಮುಳುಗುತ್ತಿದ್ದಾನೆ. ಈ ರಮ್ಯವಾದ ದೃಶ್ಯವನ್ನು ನೋಡುತ್ತೀರಿ. ಅದು ಇರುವುದೆಲ್ಲಿ? ಬೆಟ್ಟದಲ್ಲಿಯೆ? ಅಕಾಶದಲ್ಲಿಯೆ? ಯೋಚಿಸಿ.

ಆ ದೃಶ್ಯದ ಅನುಭವ ನಡೆಯುವುದೆಲ್ಲಿ? ನಿಮ್ಮ ಕಣ್ಣಿನ ತೆರೆಯ ಮೇಲೆ ತಲೆಕೆಳಗಾಗಿ ಬಿದ್ದ ಬಿಂಬವು ಜ್ಞಾನೇಂದ್ರಿಯಕ್ಕೆ ತಲುಪಿ, ನಿಮಗೆ ಕಾಣುತ್ತದೆ, ನಿಮ್ಮ ಅನುಭವದಲ್ಲಿ ಆಗ ಬೆಟ್ಟ ಎಲ್ಲಿದೆ? ನಿಮ್ಮಲ್ಲಿಯೇ ತಾನೆ?

ಕೇಳುವ ಧ್ವನಿ, ಆಘ್ರಾಣಿಸುವ ವಾಸನೆ, ಅನುಭವಿಸುವ ಸ್ಪರ್ಶ ಎಲ್ಲವೂ ನಿಮ್ಮಲ್ಲಿಯೇ ನಡೆಯುವುದಲ್ಲವೆ? ಬೆಳಕು, ಕತ್ತಲೆ, ಶಬ್ದ, ನಿಶ್ಶಬ್ದ, ವೇದನೆ, ಆನಂದ ಇವೆಲ್ಲವೂ ನಿಮ್ಮೊಳಗೇ ನಡೆಯುತ್ತದೆ.

ಯುವತಿಯೊಬ್ಬಳ ಕನಸಿನಲ್ಲಿ, ಒರಟೊರಟಾಗಿರುವ ಭಯಂಕರ ವ್ಯಕ್ತಿಯೊಬ್ಬ ಕಾಣಿಸಿಕೊಂಡ. ಅವನ ಕಣ್ಣಲ್ಲಿ ಕಾಮೋದ್ರೇಕ ಹೊರಹೊಮ್ಮುತ್ತಿತ್ತು. ಹೆದರಿಕೆಯಿಂದ ಈ ಹೆಣ್ಣಿಗೆ ನಡುಕವುಂಟಾಯಿತು. ಅವನು ತೀರ ಹತ್ತಿರಕ್ಕೆ ಬಂದ. ಇವಳು ಹಿಂದೆ ಹಿಂದೆ ಸರಿದು, ಇನ್ನು ಹಿಂದಕ್ಕೆ ಹೋಗಲಾರದೆ ಗೋಡೆಗೆ ತಾಗಿ ನಿಂತುಕೊಂಡಳು. ಅವನು, ಬಿಸಿಯುಸಿರು ತಾಗುವಷ್ಟು ಹತ್ತಿರಕ್ಕೆ ಬಂದ.

ಆ ಯುವತಿ ಕಂಗಾಲಾಗಿ ಕೇಳಿದಳು: ಅಯ್ಯೋ, ನನ್ನನ್ನು ಏನು ಮಾಡುತ್ತಿ?

ಅವನು ಹೇಳಿದ, ನೀನೇ ತಾನೇ ತೀರ್ಮಾನಿಸಬೇಕಾದವಳು? ಇದು ನಿನ್ನದೇ ಕನಸಲ್ಲವೇ?

ಜೀವನವೂ ಹೀಗೆಯೆ. ಅದನ್ನು ಅಗತ್ಯಕ್ಕೆ ತಕ್ಕ ಹಾಗೆ ರೂಪಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ.

ಸಮಸ್ಯೆಯೇನೆಂದರೆ, ನೀವು ಆನಂದವಾಗಿರಬೇಕೆಂದರೆ ನೂರು ನಿರ್ಬಂಧಗಳನ್ನು ಹಾಕಿಕೊಳ್ಳುತ್ತೀರಿ.

ನನ್ನ ಹೆಂಡತಿ ಹೀಗಿರಬೇಕು. ನನ್ನ ಮಗು ಹಾಗಿರಬೇಕು. ಪಕ್ಕದ ಮನೆಯವರು ಹೀಗಿರಬೇಕು. ಪ್ರಪಂಚವೇ ಬೇರೊಂದು ರೀತಿಯಲ್ಲಿ ಇರಬೇಕೆಂದು, ಹಲವಾರು ನಿರ್ಬಂಧಗಳನ್ನು ವಿಧಿಸಿಕೊಂಡಾಗ, ನಿಮ್ಮ ಆನಂದ ಬೇರೊಬ್ಬರ ಕಟ್ಟುಪಾಡುಗಳಿಗೆ ತಾನೆ ಒಳಪಡುವುದು?

ಆಸೆಯೇ ನಿಜವಾಗಿಯೂ ದುಃಖಕ್ಕೆ ಮೂಲವೇ?

ನೀವು ಆನಂದವಾಗಿ ಇದ್ದರೆ, ಸುತ್ತಮುತ್ತಲಿನ ಎಲ್ಲರನ್ನೂ ಆನಂದದಿಂದ ಇರಿಸಿಕೊಳ್ಳುತ್ತೀರಿ. ದುಃಖಿತರಾಗಿದ್ದರೆ ಸುತ್ತಲಿರುವವರ ಸುಖವನ್ನು ಕೆಡಿಸುತ್ತೀರಿ.

ನಿಮ್ಮಲ್ಲಿಗೆ ಒಬ್ಬ ಸ್ವಾಮೀಜಿಯವರು ಬರುತ್ತಾರೆ. ಆಸೆಯೇ ದುಃಖಗಳಿಗೆ ಕಾರಣ, ಎನ್ನುತ್ತಾರೆ. ಮತ್ತೊಬ್ಬರು, ಇಹಲೋಕದ ಸುಖಕ್ಕೆ ಆಸೆಪಡುವುದನ್ನು ಬಿಟ್ಟು ಸ್ವರ್ಗಕ್ಕಾಗಿ ಆಸೆಪಡು. ಅಧಿಕಾರಕ್ಕೆ ಆಸೆಪಡುವುದನ್ನು ಬಿಟ್ಟು ನೆಮ್ಮದಿಗಾಗಿ ಆಸೆಪಡು ಎಂದು ಸಾವಿರ ಹಿತನುಡಿಗಳಿಂದ ನಿಮ್ಮ ಮನಸ್ಸಿನಲ್ಲಿ ಪಾಪಭೀತಿಯನ್ನು ಹೆಚ್ಚಿಸುತ್ತಾರೆ.

ಹಣದಾಸೆಯೇ ನಿನ್ನ ಎಲ್ಲ ದುಃಖಗಳಿಗೆ ಕಾರಣ. ದೇವರಲ್ಲಿ ಆಸೆಯಿಡು ಎಂದೊಬ್ಬರು ಹೇಳುತ್ತಾರೆ.

ದೇವರನ್ನು ನಂಬಿ ನಿಮ್ಮಲ್ಲಿರುವ ಹಣವನ್ನೆಲ್ಲ ಬಡಬಗ್ಗರಿಗೆ ಹಂಚಿಬಿಟ್ಟರೆ ನೆಮ್ಮದಿ ಬಂದುಬಿಡುತ್ತದೆಯೆ?

ದೇಶದಲ್ಲಿರುವ ಬಡವರಲ್ಲಿ ಇನ್ನೊಬ್ಬರು ಹೆಚ್ಚಾಗುತ್ತಾರಷ್ಟೆ.

ಹಣದಿಂದ ಏನೇನು ಮಾಡಲು ಸಾಧ್ಯವೆನ್ನುವುದಕ್ಕೆ ನಿಮಗೆ ಪ್ರತ್ಯಕ್ಷ ಅನುಭವವಿರುತ್ತದೆ. ದೇವರಿಂದ, ಏನು ಮಾಡಲು ಸಾಧ್ಯ, ಏನು ಸಾಧ್ಯವಿಲ್ಲ ಎಂಬುದರ ಬಗೆಗೆ ನಿಮಗೆ ಯಾವುದೇ ಅನುಭವವಿಲ್ಲ.

ಒಮ್ಮೆ ಶಂಕರನ್ ಪಿಳ್ಳೆಗೆ ಸಹಿಸಲಾರದ ಬೆನ್ನುನೋವಿನಿಂದ ತೊಂದರೆಯಾಯಿತು.

ಡಾಕ್ಟರು ಬೆನ್ನುಮೂಳೆಯ ಎಕ್ಸ್-ರೇಯನ್ನು ಪರೀಕ್ಷಿಸಿ ಹೇಳಿದರು, ಈ ಸಮಸ್ಯೆಗೆ ಆಪರೇಷನ್ ಮಾಡಲೇಬೇಕು. ಫೀಸು ಇಪ್ಪತ್ತೈದು ಸಾವಿರ. ಆಸ್ಪತ್ರೆಯಲ್ಲಿ ಆರು ವಾರಗಳು ತಂಗಿರಬೇಕು.

ಶಂಕರನ್ ಪಿಳ್ಳೆ ಗಾಬರಿಕೊಂಡರು. ಅಷ್ಟೊಂದು ಹಣವನ್ನು ತರುವುದೆಲ್ಲಿಂದ?

ಈಗಲೇ ಬರುತ್ತೇನೆ, ಡಾಕ್ಟರ್ ಎಂದು ಎಕ್ಸ್-ರೇಯನ್ನು ತೆಗೆದುಕೊಂಡು, ಎಕ್ಸ್-ರೇ ತೆಗೆದವರ ಬಳಿಗೆ ಹೋದರು. ಡಾಕ್ಟರಿಗೆ ಐವತ್ತು ರೂಪಾಯಿ ಕೊಟ್ಟು, ಒಂದು ಗಂಟೆಯೊಳಗಾಗಿ ಚಿಕಿತ್ಸೆ ಮುಗಿಯುವಂತೆ ಈ ಎಕ್ಸ್-ರೇಯನ್ನು ತಿದ್ದಿಕೊಡಲು ಸಾಧ್ಯವೆ? ಎಂದು ಕೇಳಿದರು.

ಹೀಗೆ ಎಕ್ಸ್-ರೇಯನ್ನು ತಿದ್ದಿಕೊಡುವ ಸ್ವಾಮಿಗಳೇ, ಆಸೆಗಳನ್ನು ಒಂದರಿಂದ ಮತ್ತೊಂದಕ್ಕೆ ಬದಲಾಯಿಸಿಕೊಳ್ಳಲು ಹೇಳುವಂತಹವರು.

ಸರಿ, ಹಾಗಾದರೆ ಆಸೆಗಳನ್ನು ಬಿಟ್ಟುಬಿಡಬೇಕೆ? ಇಟ್ಟುಕೊಳ್ಳಬಹುದೆ?

’ಇಷ್ಟಪಟ್ಟರೆ ನನಗೆ ಇನ್ನೂ ಸಿಗುತ್ತದೆ. ಆದರೆ ನನಗಿಷ್ಟು ಸಾಕು’, ಎಂಬ ವೈರಾಗ್ಯದಿಂದ ಆಸೆಯನ್ನು ಕಡಮೆ ಮಾಡಿಕೊಂಡರೆ, ಅದನ್ನು ಒಪ್ಪಿಕೊಳ್ಳಬಹುದು. ಅದು ತೃಪ್ತಿ-ಸಂತೋಷವನ್ನು ನೀಡುತ್ತದೆ.

ಆಸೆಯಿಲ್ಲದೆ ಈ ಪ್ರಪಂಚವೇ ಇಲ್ಲ. ಆಸೆಯಿಲ್ಲದೆ ಅಲೆಯೂ ಏಳುವುದಿಲ್ಲ; ಗಾಳಿಯೂ ಬೀಸುವುದಿಲ್ಲ, ಸೂರ್ಯ ಉದಯಿಸುವುದಿಲ್ಲ, ಅಣು ಚಲಿಸುವುದಿಲ್ಲ, ಮೂಲಭೂತವಾದ ವ್ಯವಸ್ಥೆಯೇ ಇರುವುದಿಲ್ಲ. ಈ ದೇಹ, ಈ ಜೀವ ಯಾವುದೂ ಇರುವುದಿಲ್ಲ. ಅಷ್ಟೇಕೆ, ಮುಂದಿನ ಉಸಿರೇ ನಡೆಯುವುದಿಲ್ಲ.

ಆಸೆ ಪಡಬಾರದೆಂದು ಈ ಪ್ರಪಂಚ ಎಂದಿಗೂ ನಿಮಗೆ ಹೇಳಲಿಲ್ಲ. ಆಸೆಯನ್ನು ಬಿಟ್ಟರೆ ಎಲ್ಲವೂ ಸರಿಯಾಗುತ್ತದೆ ಎಂಬುದು ಮೂರ್ಖತನ.

ಬೇರೆಯವರು ಹೇಳುವುದಿರಲಿ, ಆಸೆಯನ್ನು ಬಿಟ್ಟುಬಿಡಬೇಕೆ, ಬೇಡವೆ ಎಂಬುದನ್ನು ನಿಮ್ಮಲ್ಲಿಯೇ ಯೋಚಿಸಿ ನೋಡಿ. ನಿಮ್ಮ ಮನಸ್ಸಿನೊಂದಿಗೆ ಕೇಳಿದರೆ, ಹೌದೌದು, ಆಸೆಯನ್ನು ತೊಲಗಿಸಬೇಕೆಂದು ತೀರ್ಮಾನಿಸಿದ್ದೇನೆ ಎಂದು ಏಮಾರಿಸಿ ಜ್ಞಾನದ ಮಾತನಾಡುತ್ತದೆ.

ಮನಸ್ಸು ಬಹಳ ತಂತ್ರಿ, ಏನಾದರೂ ಹೇಳಿ ನಿಮ್ಮನ್ನು ನಂಬಿಸುವಂತಹ ಸೂಕ್ಷ್ಮತೆ ಅದಕ್ಕೆ ತಿಳಿದಿರುತ್ತದೆ. ಆದರೆ ನಿಮ್ಮ ದೇಹ, ಅದು ಸುಳ್ಳನ್ನು ಹೇಳಲಾರದು. ನಿಮಗೆ ಆಸೆ ಇದೆಯೆ, ಇಲ್ಲವೆ ಎಂಬುದನ್ನು ನಿಮ್ಮ ದೇಹದೊಂದಿಗೆ ವಿಚಾರಿಸಿ ನೋಡಿ.

ಉಸಿರಾಡದಂತೆ ನಿಮ್ಮ ಬಾಯಿ ಮತ್ತು ಮೂಗನ್ನು ಕೆಲವು ನಿಮಿಷ ಬಿಗಿಹಿಡಿಯಿರಿ. ಒಂದು ನಿಮಿಷ, ಎರಡು ನಿಮಿಷ ಸಾಧ್ಯವಾದಷ್ಟು ಹೊತ್ತು ದೇಹ ತಾಳಿಕೊಳ್ಳುತ್ತದೆ. ಆನಂತರ, ಬದುಕಬೇಕೆಂದು ನಿಮ್ಮ ದೇಹದಲ್ಲಿ ಏಳುವ ಆಸೆ, ನಿಮ್ಮ ಕೈಯನ್ನು ಸಡಿಲಗೊಳಿಸುತ್ತದೆ. ಅದುವರೆಗೆ ಕಳೆದುಕೊಂಡದ್ದನ್ನೂ ಸೇರಿಸಿ ಬಾಚಿಕೊಂಡು ಗಾಳಿಯನ್ನು ಹೀರುತ್ತದೆ. ನಿಮ್ಮ ಮನಸ್ಸು ಹೇಳಿದ ತತ್ತ್ವಗಳೆಲ್ಲವೂ ದೇಹದೊಂದಿಗೆ ಕೆಲಸಮಾಡಲಾರವು. ಏಕೆಂದರೆ ದೇಹಕ್ಕೆ ಸುಳ್ಳು ಮೋಸ ತಿಳಿಯುವುದಿಲ್ಲ.

ದೇಹದಲ್ಲಿರುವ ಪ್ರತಿಕಣವೂ ಆಸೆಯಲ್ಲಿ ತೊಡಗಿಕೊಂಡಿರುತ್ತದೆ. ಅಗತ್ಯವಿಲ್ಲದ ಅತಿಥಿಯಾಗಿ ಯಾವುದೇ ಕ್ರಿಮಿ ಒಳಪ್ರವೇಶಿಸಲು ನೋಡಲಿ, ಇದರ ವಿರುದ್ಧ ಹೋರಾಡಲೆ? ಸುಮ್ಮನಿರಲೆ? ಎಂದು ಒಂದು ಕ್ಷಣವೂ, ನಿಮ್ಮ ಅನುಮತಿಯನ್ನು ಕೇಳಲು ಅದು ಸಿದ್ಧವಾಗುವುದಿಲ್ಲ. ಕಣಕಣವೂ ಆಯುಧಧಾರಿಯಾಗಿ ತೀವ್ರವಾದ ಹೋರಾಟಕ್ಕೆ ಹೊರಡುವುದಲ್ಲವೆ? ಏಕೆ?

ಪ್ರಪಂಚವು ಅದಕ್ಕೆ ಜೀವಿಸಲು ಆಸೆಯನ್ನು ಕೊಟ್ಟಿರುತ್ತದೆ. ನಿಮಗೆ ಆಸೆಯಿಲ್ಲವಾದರೆ ಈ ಸಾಲನ್ನು ನೀವು ಓದಲಾಗುತ್ತಿರಲಿಲ್ಲ. ಮುಂದಿನ ಸಾಲಿನತ್ತ ನೋಡಲು ಸಾಧ್ಯವಾಗುವುದಿಲ್ಲ, ನಿಲ್ಲಲಾಗುವುದಿಲ್ಲ, ನಡೆಯಲಾಗುವುದಿಲ್ಲ, ನಿದ್ರಿಸಲಾಗದು, ತಿನ್ನಲಾಗದು.

ನಾನು ಹಸಿವೆಗಾಗಿ ತಿನ್ನುತ್ತೇನೆ, ಆಸೆಗಾಗಿ ತಿನ್ನುವುದಿಲ್ಲವೆಂದು ನೀವು ಹೇಳಬಹುದು.

ಚೆನ್ನಾಗಿ ಹಸಿವಾಗಿರುವ ಸಮಯದಲ್ಲಿ ನಿಮ್ಮ ಬಂಧುಗಳ ಮನೆಗೆ ಹೋಗಿರುತ್ತೀರಿ. ಎಲೆ ಹಾಕಿ, ರುಚಿರುಚಿಯಾದ ಊಟವನ್ನು ಬಡಿಸುತ್ತಾರೆ. ನೀವು ಮೊದಲನೆಯ ತುತ್ತನ್ನು ಇನ್ನೇನು ಬಾಯಿಗೆ ಹಾಕಿಕೊಳ್ಳಬೇಕು ಎಂದುಕೊಂಡಾಗ, ನಿಮ್ಮನ್ನು ಕುರಿತು ಯಾರೋ ಅಸಹ್ಯವಾಗಿ ಆಡಿಕೊಳ್ಳುತ್ತಾರೆ. ಮುಂದಿನ ತುತ್ತು ಒಳಕ್ಕೆ ಇಳಿಯುತ್ತದೆಯೆ?

ಚೆನ್ನಾಗಿ ಗಮನಿಸಿ.

ಹಸಿವು ತೀರಲಿಲ್ಲ. ಆದರೆ ತಿನ್ನಲಾಗುವುದಿಲ್ಲ. ಏಕೆ?

ತಿನ್ನುವ ಆಸೆ ಹೊರಟುಹೋಯಿತು.

ಮತ್ತಷ್ಟು ಆಳವಾಗಿ ನೋಡಿದರೆ, ಆಸೆಗಳನ್ನು ತೊಲಗಿಸಬೇಕೆಂಬುದು ಸಹ ಮೂಲಭೂತವಾಗಿ ಒಂದು ಆಸೆಯೇ ಅಲ್ಲವೆ?

ಸರಿ, ಯಾವ ಪ್ರಮಾಣದಲ್ಲಿ ಆಸೆಯನ್ನು ಬೆಳೆಸಬೇಕು? ಆಸೆಪಡುವಾಗ ಅದಕ್ಕೇಕೆ ಚೌಕಾಶಿ? ಬಹಳ ಹೆಚ್ಚಾಗಿಯೇ, ಆಸೆಪಡಿ. ಆ ಧೈರ್ಯವೂ ಇಲ್ಲದೆ ಆಸೆಯನ್ನು ಕಡಮೆಮಾಡಿಕೊಂಡರೆ, ಬೇರೇನನ್ನು ನೀವು ದೊಡ್ಡದಾಗಿ ಸಾಧಿಸಲಾಗುತ್ತದೆ?

’ಇಷ್ಟಪಟ್ಟರೆ ನನಗೆ ಇನ್ನೂ ಸಿಗುತ್ತದೆ. ಆದರೆ ನನಗಿಷ್ಟು ಸಾಕು’, ಎಂಬ ವೈರಾಗ್ಯದಿಂದ ಆಸೆಯನ್ನು ಕಡಮೆ ಮಾಡಿಕೊಂಡರೆ, ಅದನ್ನು ಒಪ್ಪಿಕೊಳ್ಳಬಹುದು. ಅದು ತೃಪ್ತಿ-ಸಂತೋಷವನ್ನು ನೀಡುತ್ತದೆ.

ಆಸೆಯೇ ನಿಜವಾಗಿಯೂ ದುಃಖಕ್ಕೆ ಮೂಲವೇ?

ಆದರೆ, ’ನನಗೆಲ್ಲಿ ಅದೆಲ್ಲ ಸಿಗುತ್ತದೆ? ಇರುವಷ್ಟು ಸಾಕು’, ಎಂದು ನಿಮ್ಮ ಆಸೆಯ ರೆಕ್ಕೆಗಳನ್ನು ಕತ್ತರಿಸಿಕೊಂಡರೆ ಅದು ಹೇಡಿತನ.

ಆದ್ದರಿಂದ ನೀವು ಆಸೆಪಡುವುದು ಆದಷ್ಟು ದೊಡ್ಡದಾಗಿಯೇ ಇರಲಿ. ಅದನ್ನು ತಲುಪಲು ಸಂಪೂರ್ಣವಾದ ಉತ್ಸಾಹದಿಂದ, ಸರ್ವಪ್ರಯತ್ನಗಳನ್ನೂ ನೀವು ಮಾಡಬೇಕು.

ಹಾಗಾದರೆ ಯಾವುದು ಆಸೆ, ಯಾವುದು ದುರಾಸೆ?

ಮೋಟಾರ್ ಸೈಕಲ್ ಇಟ್ಟುಕೊಂಡಿರುವವರು ಕಾರನ್ನು ಕೊಳ್ಳಬೇಕೆಂದರೆ ಅದನ್ನು ಆಸೆಯೆನ್ನುತ್ತೀರಿ. ಅದನ್ನೇ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿರುವವನು ಹೇಳಿದರೆ ದುರಾಸೆ ಎನ್ನುತ್ತೀರಿ.

ಹೋಲಿಸಿ ನಿರ್ಧರಿಸುವ ಗುಣ ನಿಮ್ಮಲ್ಲಿರುವವರೆಗೆ ಈ ಗೊಂದಲ ಮುಗಿಯುವುದಿಲ್ಲ.

ವಾಸ್ತವದಲ್ಲಿ, ನಿಮ್ಮ ಆಸೆ ಎಲ್ಲಿ ತನ್ನ ಬೇರುಗಳನ್ನು ಊರಿದೆಯೆಂಬುದನ್ನು ಗಮನಿಸಿ.

ಮದುವೆಯಾದರೆ ಸಂತೋಷವೆಂದು ಆಸೆಪಟ್ಟಿರಿ, ಮದುವೆಯಾಯಿತು. ಮಕ್ಕಳಾದರೆ ಜೀವನ ಸಾರ್ಥಕವೆಂದು ಸಂತೋಷಪಟ್ಟಿರಿ. ಮಕ್ಕಳ ಜನನವೂ ಆಯಿತು. ಆದರೆ?

ಈಗ, ನನ್ನ ನೆಮ್ಮದಿ ಹೋದದ್ದು ಅವರಿಂದಲೇ, ಎಂದಳುತ್ತಿದ್ದೀರಿ. ಕೋಟಿ ರೂಪಾಯಿ ದೊರೆತರೆ ಸಂತೋಷವೆನ್ನುತ್ತೀರಿ. ದೊರೆಯಿತು. ಆದರೆ ಕುಳಿತು ಊಟ ಮಾಡಲು ಸಹ ಸಮಯವಿಲ್ಲದೆ, ಬ್ರೆಡ್ಡನ್ನು ಅಗಿಯುತ್ತಾ ಮುಂದಿನ ಬಿಸಿನೆಸ್‌ನ ಗೆಲುವಿಗಾಗಿ ಕಾರಿನಲ್ಲಿ, ಟೆನ್‌ಷನ್‌ನ್ನೂ, ಕಂಪ್ಯೂಟರನ್ನೂ ಜತೆಯಲ್ಲಿರಿಸಿಕೊಂಡೇ ಓಡಾಡುತ್ತೀರಿ.

ಹೀಗೆಯೇ ಶಂಕರನ್ ಪಿಳ್ಳೆಯೂ ಒಮ್ಮೆ ಸಿಕ್ಕಿಬಿದ್ದರು.

ಸಾಕಷ್ಟು ಅನುಕೂಲಗಳು ದೊರೆಯುತ್ತವೆಂದು ಪಿಳ್ಳೆಯವರು ಸೈನ್ಯದಲ್ಲಿ ಸೇರಿಕೊಂಡರು. ಎಲ್ಲಿಯೋ ಕೊಂಚ ಎಡವಟ್ಟಾಗಿ, ಚಿಕ್ಕ ಅಳತೆಯ ಬೂಟುಗಳನ್ನು ಅವರಿಗೆ ಕೊಡಲಾಯಿತು. ಪ್ರತಿದಿನ ಅವುಗಳಲ್ಲಿ ಕಾಲುಗಳನ್ನು ತೂರಿಸುವುವಾಗ ಬೆರಳುಗಳೆಲ್ಲವೂ ಒಂದರ ಮೇಲೊಂದು ಬಂದು, ಪಾದಗಳಲ್ಲಿ ಅಸಾಧ್ಯ ನೋವಾಗುತ್ತಿತ್ತು. ನೋವನ್ನು ತಾಳಲಾರದೆ ಪಿಳ್ಳೆಯವರು ಇಡೀ ಊರಿಗೆ ಶಾಪ ಹಾಕುತ್ತಿದ್ದರು.

’ವಿಷಯವನ್ನು ಹೇಳಿದರೆ ಸರಿಯಾದ ಅಳತೆಯ ಬೂಟ್ಸ್‌ಗಳನ್ನು ಕೊಡುತ್ತಾರಲ್ಲವೆ, ಹೀಗೇಕೆ ಕಷ್ಟ ಪಡುತ್ತಿದ್ದೀಯೆ?’ ಎಂದು ಜತೆಯಲ್ಲಿದ್ದ ಸೈನಿಕ ಪಿಳ್ಳೆಯವರನ್ನು ಪ್ರಶ್ನಿಸಿದ.

ಅದಕ್ಕೆ ಪಿಳ್ಳೆಯವರು, ನೋಡುತ್ತಿದ್ದೀಯಲ್ಲವೆ? ಪ್ರತಿದಿನ ಎಂತಹ ಕಷ್ಟದ ತರಬೇತಿಗಳು, ಮೂಳೆಯೆಲ್ಲವೂ ಮುರಿಯುವಂತಹ ಕೆಲಸಗಳು, ಯಾವುದರಲ್ಲಾದರೂ ಸಂತೋಷವಿದೆಯೆ? ರಾತ್ರಿ ಈ ಬೂಟ್ಸ್‌ಗಳನ್ನು ಕಳಚಿ ಹಾಕುವಾಗ ಅಬ್ಬಬ್ಬಾ!, ಎಂತಹ ಸಂತೋಷವಾಗುತ್ತದೆಯೆಂಬುದು ಗೊತ್ತೆ? ಮಿಲಿಟರಿಯಲ್ಲಿ ದೊರೆಯುವ ಅದೊಂದು ಸಂತೋಷವನ್ನೂ ಕಳೆದುಕೊಳ್ಳುವಂತೆ ಹೇಳುವೆಯಾ? ಎಂದರು.

ಶಂಕರನ್ ಪಿಳ್ಳೆಯಂತೆ ಸಂತೋಷವನ್ನೇ ಪಕ್ಕಕ್ಕಿಟ್ಟು, ಯಾವಾಗ ಬೂಟ್ಸ್‌ಗಳನ್ನು ಕಳಚಬೇಕೆಂದು, ನಿಮಗೇನಾದರೂ ತವಕವುಂಟಾಗಿದೆಯೆ? ಹೇಳಿ.

ಸಂತೋಷವಾಗಿ ಬಾಳಬೇಕೆಂಬುದೇ ಅಲ್ಲವೇ, ನಿಮ್ಮೆಲ್ಲ ಆಸೆಗಳಲ್ಲಿ ಹುದುಗಿರುವ ಸತ್ಯ?

ನೀವು ಕೇಳಿದ್ದು ದೊರೆಯಿತು. ಆದರೆ ತೃಪ್ತಿಯಿಲ್ಲದೆ ಮುಂದಿನದು, ಮುಂದಿನದು ಎಂದು ಆಸೆ ಮುನ್ನುಗ್ಗುತ್ತಲೇ ಇದೆ. ಹೀಗೇಕೆ?

ತಪ್ಪು ನಡೆದಿದ್ದೆಲ್ಲಿ? ಇದು ನಿಮ್ಮದೇ ಅಥವಾ ಆಸೆಯ ತಪ್ಪೆ?