logo
logo

Adiyogi – An Iconic Presence

ಆದಿಯೋಗಿ ಶಿವ - ಒಂದು ಜಾಜ್ವಲ್ಯಮಾನ ಸನ್ನಿಧಿ



ಒಂದು ರೀತಿಯಲ್ಲಿ, ಶಿವನು ಮೂರನೆಯ ಕಣ್ಣಿಗೆ ಸಮಾನಾರ್ಥಕವಾಗಿದ್ದಾನೆ. ಅವನಿಗಿರುವ ಅನೇಕ ಹೆಸರುಗಳಲ್ಲಿ ತ್ರ್ಯಂಬಕ ಅಥವಾ ತ್ರಿನೇತ್ರ ಎನ್ನುವುದೂ ಒಂದು. ಮೂರನೆಯ ಕಣ್ಣಿಂದ ಅವನು "ಯಾವುದಿಲ್ಲವೋ ಅದನ್ನು" ಗ್ರಹಿಸುತ್ತಾನೆ. "ಯಾವುದು ಇದೆಯೋ" ಅದು ಭೌತಿಕ ಅಭಿವ್ಯಕ್ತಿ; "ಯಾವುದಿಲ್ಲವೋ ಅದು" ಭೌತಿಕವಾದದ್ದಲ್ಲ. ನಿಮ್ಮ ಐದು ಇಂದ್ರಿಯಗಳ ಮೂಲಕ ನೀವು ಏನನ್ನು ಗ್ರಹಿಸುವುದಿಲ್ಲವೋ, ಅದು ನಿಮ್ಮ ಅನುಭವದಲ್ಲಿರುವುದಿಲ್ಲ. ಶ್ರಮಿಸಲು ಸಿದ್ಧವಿದ್ದರೆ, ಮಾನವನು "ಯಾವುದಿಲ್ಲವೋ ಅದ"ನ್ನು, ಯಾವುದು ಭೌತಿಕವಲ್ಲವೋ ಅದನ್ನು - "ಶಿ ವ"ನನ್ನು ನೋಡಬಹುದು. ತಮ್ಮಲ್ಲಿ ಈಗಿರುವುದಕ್ಕಿಂತ ಹೆಚ್ಚಿನದ್ದನ್ನು ಹೊಂದುವ ಮನುಷ್ಯರ ಹಂಬಲವು ಬಹಳ ಪ್ರಾಣಹಾನಿಗೆ ಕಾರಣವಾಗಿದೆ, ಅನೇಕ ಜೀವಿಗಳನ್ನು ಅಳಿವಿನಂಚಿಗೆ ತಳ್ಳಿದೆ, ಸ್ವತಃ ಭೂಮಿಯೂ ಅಪಾಯದಲ್ಲಿದೆ. ಹಣ, ಅಂತಸ್ತು, ಸಂಬಂಧಗಳು, ಕುಟುಂಬ, ಅಥವಾ ನಿಮಗೆ ‘ನಾನು ಹಿಂದಿಗಂತಲೂ ಸ್ವಲ್ಪ ಹೆಚ್ಚಾದೆ’ ಎಂಬ ಅನುಭವವನ್ನು ಯಾವುದು ನೀಡುತ್ತದೋ ಅಂತದ್ದೆಲ್ಲವನ್ನೂ ನೀವು ಕೂಡಿಹಾಕಿಕೊಳ್ಳುವಿರಿ - ಆದರೆ, ನೀವಿದನ್ನು ಕೇವಲ ಬೇರೊಬ್ಬರಂದಿಗೆ ಹೋಲಿಸಿಕೊಂಡು ಮಾಡುತ್ತಿದ್ದೀರಿ. ಸ್ವತಃ ನಿಮ್ಮ ಯಾವುದೇ ಗುಣಗಳು ವರ್ಧಿಸುವುದಿಲ್ಲ. ನಿಮ್ಮ ಗ್ರಹಣಶೀಲತೆಯನ್ನು ವರ್ಧಿಸಿದಾಗ ಮಾತ್ರ, ನೀವು ಜೀವನವನ್ನು ಅನುಭವಿಸುವ ರೀತಿ ವರ್ಧಿಸುತ್ತದೆ.

ಆದಿಯೋಗಿಯ ಈ ಪ್ರತಿಮೆ, ಭೂಮಿ ಮೇಲಿನ ಅತಿ ದೊಡ್ಡ ಮುಖವಾಗಿರುತ್ತದೆ.

ಗ್ರಹಣಶೀಲತೆಯ ವರ್ಧನೆಯೇ ಅಂತಿಮವಾಗಿ ಜೀವನವನ್ನು ಉತ್ತಮಗೊಳಿಸುತ್ತದೆ ಎಂದು ಜನರಿಗೆ ಅರ್ಥವಾಗಲು ನಾವು ಆದಿಯೋಗಿಯನ್ನು ಒಂದು ಹೆಗ್ಗುರುತಾಗಿ ಮಾಡಲು ಯೋಜಿಸುತ್ತಿದ್ದೇವೆ. ನಾವು ಆದಿಯೋಗಿಯ ನೂರಾ ಹನ್ನೆರಡು ಅಡಿ ಎತ್ತರದ ಮುಖವನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದ್ದೇವೆ. ಈ ಸಂಖ್ಯೆಯು ಸಾಂಕೇತಿಕವಾಗಿ ಮತ್ತು ವೈಜ್ಞಾನಿಕವಾಗಿಯೂ ನಮ್ಮ ಅಸ್ತಿತ್ವಕ್ಕೆ ಮಹತ್ವದ್ದಾಗಿದೆ, ಏಕೆಂದರೆ ಮಾನವರು ಅವರ ಪರಮ ಸ್ವರೂಪವನ್ನು ಪಡೆಯಲು ಅವನು ನೂರಾ ಹನ್ನೆರಡು ವಿಧಾನಗಳನ್ನು ತೆರೆದಿಟ್ಟನು ಮತ್ತು ನೀವು ಸಾಧನೆಗೈಯಬಹುದಾದ ನೂರಾ ಹನ್ನೆರಡು ಚಕ್ರಗಳಿವೆ. ಆದಿಯೋಗಿಯ ಈ ಮುಖ ಭೂಮಿಯಲ್ಲೇ ಅತಿ ದೊಡ್ಡದಾಗಿರುತ್ತದೆ. ಆದಿಯೋಗಿಯ ಪ್ರತಿಮೆಯ ಜೊತೆಗೆ ಆದಿಯೋಗಿಯ ಪುಸ್ತಕವೂ ಹೊರತರಲಾಗುತ್ತಿದೆ ಮತ್ತು ಸಾಧ್ಯವಾದರೆ, ಇನ್ನೊಂದೆರಡು ವರ್ಷಗಳಲ್ಲಿ ಒಂದು ಚಲನಚಿತ್ರವೂ ತೆರೆಕಾಣುತ್ತದೆ.
ಮಹಾಶಿವರಾತ್ರಿ 2022 – ವೆಬ್ ನೇರ ಪ್ರಸಾರದಲ್ಲಿ ವೀಕ್ಷಿಸಿ



ಈ ರೀತಿಯ ಒಂದು ವಿಶಿಷ್ಟವಾದ ಮುಖವನ್ನು ರಚಿಸುವುದು ಬರೀ ಒಂದು ಸ್ಮಾರಕವನ್ನು ನಿರ್ಮಿಸುವುದಕ್ಕಲ್ಲ. ಇದನ್ನು ನಂಬಿಕೆ ಕಟ್ಟುಪಾಡಿನೊಳಗಿರುವ ಜನಸಮೂಹದ ಪ್ರಪಂಚದಿಂದ, ಜೀವನ ಮತ್ತು ಜೀವನದಾಚೆಯ ಸತ್ಯವನ್ನು ಅರಸುವ ವ್ಯಕ್ತಿಗಳ ಪ್ರಪಂಚವಾಗಿ ರೂಪಾಂತರಗೊಳಿಸುವುದಕ್ಕಾಗೊಂದು ಹುರಿದುಂಬಿಸುವ ಶಕ್ತಿಯನ್ನಾಗಿ ಬಳಸಿಕೊಳ್ಳಲಾಗುವುದು. ಮತಶ್ರದ್ಧಾಳುಗಳು ಎಂತಹ ಭಯಂಕರವಾದ ಸಂಗತಿಗಳನ್ನು ಮಾಡಲು ಶಕ್ತರೆಂಬುದು ನಿಮಗೆ ತಿಳಿದೇ ಇದೆ. ಕೆಲವರು ಇದನ್ನು ಧರ್ಮ ಅಧರ್ಮದ ನಡುವಿನ ಯುದ್ಧವೆಂದು ಹೇಳಿದರೂ, ಜಗತ್ತಿನಲ್ಲಿ ಆಗುತ್ತಿರುವ ಎಲ್ಲಾ ಘರ್ಷಣೆಗಳು ಮೂಲತಃ ಒಬ್ಬನ ನಂಬಿಕೆ ಮತ್ತು ಇನ್ನೊಬ್ಬನ ನಂಬಿಕೆಯ ವಿರುದ್ಧದ ಘರ್ಷಣೆಗಳು. ಯಾವಾಗ ನೀವು ಏನನ್ನಾದರೂ ನಂಬುತ್ತೀರೋ, ಆಗ ಬೇರೆಲ್ಲದಕ್ಕೂ ನೀವು ಕುರುಡಾಗುತ್ತೀರಿ. ನಿಮ್ಮ ನಂಬಿಕೆಯ ಕಟ್ಟುಪಾಡುಗಳು ಕೆಲಸ ಮಾಡಲು, ನಿಮಗೊಂದು ಹಿಂಡಿನ ಅಗತ್ಯವಿರುತ್ತದೆ. ನಿಮ್ಮದೇ ಬುದ್ಧಿಯನ್ನು ಉಪಯೋಗಿಸಿ ನೀವು ಯೋಚಿಸಿದರೆ, ನಿಮ್ಮ ನಂಬಿಕೆಗಳು ಕುಸಿದುಹೋಗುತ್ತವೆ. ಅರಸುವಿಕೆ ವೈಯಕ್ತಿಕವಾದದ್ದು. ಪ್ರತಿಯೊಬ್ಬರೂ ಸ್ವತಃ ತಮ್ಮೊಳಗೆ ಅರಸಬೇಕು.

ಈ ಸಂಸ್ಕೃತಿಯು ಸರ್ವದಾ ವೈಯಕ್ತಿಕ ಅನ್ವೇಷಣೆಯ ಬಗ್ಗೆಯಾಗಿರಬೇಕು, ಎಂದಿಗೂ ಮತಧರ್ಮದ ಬಗ್ಗೆಯಾಗಿರಬಾರದು ಎನ್ನುವಂತಹ ರೀತಿಯಲ್ಲಿ ನಮ್ಮ ಸಂಸ್ಕೃತಿಯನ್ನು ಕಟ್ಟುವುದು ಬಹಳ ಮುಖ್ಯವಾದ ವಿಷಯ. ಜಿಜ್ಞಾಸುಗಳ ಒಂದು ಒಳ್ಳೆಯ ವಿಷಯವೆಂದರೆ, ಅವರು ಆನಂದದಿಂದ ಗೊಂದಲದಲ್ಲಿರುತ್ತಾರೆ. ನೀವು ಅರಸುತ್ತಿರುವಾಗ, ಶ್ರಮಿಸಲು ಏನಾದರೂ ಇರುತ್ತದೆಯೇ ಹೊರತು ಹೊಡೆದಾಡಲಲ್ಲ. ಜಗತ್ತಿಗೆ ಇದು ತೀರ ಅತ್ಯಗತ್ಯವಾಗಿದೆ. ಇಂದು ಮಾನವರು ಯಾವ ರೀತಿಯಲ್ಲಿ ಸಶಕ್ತರಾಗಿದ್ದಾರೆಂದರೆ, ನಾವು ಸೃಷ್ಟಿಸಲು ಮತ್ತು ನಾಶಮಾಡಲು ಅಪೂರ್ವವಾದ ಸಾಮರ್ಥ್ಯವನ್ನು ಹೊಂದಿದ್ದೇವೆ. ನಾವು ಶ್ರಮಿಸುತ್ತಿರುವಾಗ, ನಾವು ಸೃಷ್ಟಿಸಲು ಪ್ರಯತ್ನಿಸುತ್ತೇವೆ. ನಾವು ಹೋರಾಡುತ್ತಿರುವಾಗ, ನಾಶ ಮಾಡುತ್ತೇವೆ. ನಂಬುವುದು ಎಂದರೆ, ನಿಮಗೆ ಯಾವ ಸುಳಿವೂ ಇಲ್ಲದ ಆಯಾಮದ ಬಗ್ಗೆ ಸ್ಪಷ್ಟತೆಯನ್ನು ಕಲ್ಪಿಸಿಕೊಳ್ಳುವುದು ಎಂದರ್ಥ. ಇದು ನಿಮಗೆ ಸ್ಪಷ್ಟತೆ ಇಲ್ಲದಿರುವ ಆತ್ಮವಿಶ್ವಾಸವನ್ನು ಕೊಡುತ್ತದೆ - ಇದು ಬಹಳ ಹಾನಿಕಾರಕ. ಅರಸುವುದರ ಅರ್ಥ ನಿಶ್ಚಿತತೆಯಿಂದ ಅನಿಶ್ಚಿತತೆಗೆ ಪ್ರಜ್ಞಾಪೂರ್ವಕವಾಗಿ ಕಾಲಿಡುವುದು. ನೀವು ಯಾವಾಗಲೂ ಹೊಸ ಸ್ಥಳಕ್ಕೆ ಕಾಲಿಡುತ್ತಿದ್ದೀರಿ ಎಂದರೆ, ನೀವು ನಿಜವಾಗಿಯೂ ಮುಂದುವರೆಯುತ್ತಿದ್ದೀರಿ ಎಂದು. ನಿಶ್ಚಿತತೆ ಬರುವುದು ಪರಿಚಿತತೆಯಿಂದ. ನೀವು ಅದದೇ ಜಾಗಗಳನ್ನು ಸುತ್ತುತ್ತಿದ್ದರೆ, ಖಂಡಿತವಾಗಿಯೂ ನೀವೆಲ್ಲೂ ಹೋಗುತ್ತಿರುವುದಿಲ್ಲ. ಬೇರೆ ಬೇರೆ ಆಯಾಮಗಳನ್ನು ಪರಿಶೋಧಿಸುತ್ತಿರುವವರು ಯಾವಾಗಲೂ ಅನಿಶ್ಚಿತರಾಗಿರುತ್ತಾರೆ. ದೊಡ್ಡ ವಿಜ್ಞಾನಿಗಳೂ ‘ಆದರೆ ಹೋದರೆ’ ಎಂದೇ ಅನಿಶ್ಚಿತತೆಯಲ್ಲಿ ಮಾತಾನಾಡುತ್ತಾರೆ.

ನೀವು ಅರಸುತ್ತಿರುವಾಗ, ಶ್ರಮಿಸಲು ಏನಾದರೂ ಇರುತ್ತದೆಯೇ ಹೊರತು ಹೊಡೆದಾಡಲು ಏನೂ ಇರುವುದಿಲ್ಲ.

ಮುಂದಿನ ಶಿವರಾತ್ರಿಗೆ ನಾವು ಈ ಆದಿಯೋಗಿಯ ಪ್ರತಿಮೆಯನ್ನು ಅನಾವರಣಗೊಳಿಸುತ್ತೇವೆ. ಇದನ್ನು ಸರಿಯಾದ ಸಮಯಕ್ಕೆ ಮುಗಿಸಲು ಜನರ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. 2017 ರ ಫೆಬ್ರುವರಿ 25 ರಂದು ನಾವಿದನ್ನು ಜಗತ್ತಿಗೆ ಸಮರ್ಪಿಸುತ್ತೇವೆ. ಇದು ಜೀವಮಾನದಲ್ಲಿ ನಡೆಯುವ ಅಪರೂಪದ ಕಾರ್ಯಕ್ರಮ. ಧ್ಯಾನಲಿಂಗದ ಪ್ರಾಣ ಪ್ರತಿಷ್ಠಾಪನೆಗೆ ಬರದಿದ್ದವರಿಗೆ ಅಂತಹದನ್ನು ಅನುಭವಿಸುವ ಮತ್ತು ಆದಿಯೋಗಿ ಬಗ್ಗೆ ಸಾಧ್ಯವಾದಷ್ಟು ಜಾಗೃತಿ ಉಂಟುಮಾಡುವ ಒಂದು ಸದವಕಾಶ. ಇಂದು ಮುಂದಿನ ಪೀಳಿಗೆಯವರು ಮತಶ್ರದ್ಧಾಳುಗಳಾಗದೇ, ಕೇವಲ ಸತ್ತ ನಂತರವೇ ಹೋಗುವ ಕಾಲ್ಪನಿಕ ಸ್ವರ್ಗದ ಬಗ್ಗೆ ನಂಬಿಕೆಯಿಟ್ಟುಕೊಳ್ಳದೇ, ಜಿಜ್ಞಾಸೆಯುಳ್ಳವರಾಗುವುದು ಬಹಳ ಮುಖ್ಯ. ನಂಬಿಕೆಯು ಮಾಡುವುದು ಇದನ್ನೇ - ನಿಮಗೆ ತಿಳಿದಿಲ್ಲದಿರುವುದರ ಬಗ್ಗೆ ನೀವು ನಿಸ್ಸಂಶಯವಾಗಿ ಖಚಿತರಾಗಿರುವಂತೆ ಮಾಡುತ್ತದೆ. ಸ್ವಯಂ-ರೂಪಾಂತರಣದ ಸಾಧನಗಳು ಸರ್ವೇಸಾಮಾನ್ಯವಾಗಿರುವಂತಹ ಹೊಸ ಜಾಗೃತಿಯನ್ನು ಜಗತ್ತಿನಲ್ಲಿ ಮೂಡಿಸಲು ಆದಿಯೋಗಿಯದು ಮಹತ್ವದ ಪಾತ್ರ. ಇಂದು ಜಗತ್ತಿನಲ್ಲಿ ಜನರಿಗೆ ಹಲ್ಲನ್ನು ಉಜ್ಜುವುದು ಹೇಗೆ ತಿಳಿದಿದೆಯೋ, ತಮ್ಮನ್ನು ತಾವು ಶಾಂತಿ ಹಾಗೂ ಆನಂದದಿಂದ ಇರಿಸಿಕೊಳ್ಳುವುದು ತಿಳಿದಿರಬೇಕು. ಮನುಷ್ಯರಿಗೆ ತಮ್ಮ ದೇಹ ಮತ್ತು ಮನಸ್ಸನ್ನು ಹೇಗೆ ನಿಭಾಯಿಸುವುದೆಂದು ತಿಳಿದಿರಬೇಕು. ಇದು ಘಟಿಸಿದಲ್ಲಿ, ಮಾನವರು ಪ್ರಚಂಡ ಸಂಭಾವ್ಯತೆ ಮತ್ತು ಸಾಧ್ಯತೆಯಾಗುತ್ತಾರೆ.

ಸದ್ಯದ ಪರಿಸ್ಥಿತಿಯಲ್ಲಿ, ಜನರು ಎಲ್ಲವನ್ನೂ ಒಂದು ಹೋರಾಟವನ್ನಾಗಿ ಮಾಡಲು ಸಮರ್ಥರಾಗಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಅವರ ಬಳಿ ಸ್ವಯಂ-ರೂಪಾಂತರಕ್ಕೆ ಸಾಧನಗಳಿಲ್ಲದಿರುವುದು. ನಮ್ಮ ಮನೆ ಮತ್ತು ಸಮಾಜದಿಂದ ಆರಂಭಿಸಿ, ಇದನ್ನು ಬದಲಾಯಿಸುವ ಕಾಲ ಬಂದಿದೆ. ಮಾನವವ್ಯವಸ್ಥೆಯು ಹೇಗೆ ಕಾರ್ಯಗೈಯುತ್ತದ ಎಂಬ ಬಗ್ಗೆ ಹೆಚ್ಚು ಗಮನ ಹರಿಸುವ ಸಂಸ್ಕೃತಿಯನ್ನು ನಾವು ಸೃಷ್ಟಿಸಬಹುದು. ನಿಮ್ಮ ಜೀವವ್ಯವಸ್ಥೆಯು ಹೇಗೆ ಕಾರ್ಯ ನಿರ್ವಹಿಸುತ್ತದೆಯೆಂದು ನಿಮಗೆ ತಿಳಿದರೆ, ನೀವದನ್ನು ಅದ್ಭುತವಾದ ರೀತಿಯಲ್ಲಿ ಬಳಸಿಕೊಳ್ಳಬಹುದು. ಇಲ್ಲವಾದಲ್ಲಿ, ನೀವು ಆಕಸ್ಮಿಕದಿಂದ ಜೀವಿಸುತ್ತೀರಿ: ಅದರರ್ಥ, ನೀವು ಸ್ವಭಾವಯುತವಾಗಿಯೇ ಆತಂಕದಲ್ಲಿರುತ್ತೀರಿ. ಹೀಗಿದ್ದಾಗ, ಸರಳವಾದ ಸಂಗತಿಗಳು ದೊಡ್ಡ ಪ್ರಯಾಸವಾಗಬಹುದು. ಹೆಚ್ಚಿನವರು ಮಾಡುತ್ತಿರುವುದೇನು? ಅವರ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದಾರೆ.

ಅವರು ಬಯಸಿದರೆ, ಮಕ್ಕಳನ್ನು ಮಾಡಿಕೊಳ್ಳುತ್ತಾರೆ, ಕೊನೆಗೊಂದು ದಿನ ಸಾಯುತ್ತಾರೆ. ಬೇರೆಲ್ಲ ಜೀವಿಗಳೂ ಅದನ್ನೇ ಬಹಳ ಪರಿಣಾಮಕಾರಿಯಾಗಿ ಮಾಡುತ್ತಿದೆ. ಮಾನವರಲ್ಲಿ ಎಲ್ಲವೂ ಋಣಾತ್ಮಕವಾಗಿದೆ ಎಂದಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದ ಗುಣಮಟ್ಟ ಮತ್ತು ಜಗತ್ತಿಗೆ ಅದರಿಂದ ಪ್ರಯೋಜನವೇನೆಂಬುದು ಮೂಲತಃ ಅದನ್ನು ಯಾರು ನಿರ್ವಹಿಸುತ್ತಾರೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿವೇಚನೆಯಿಂದ, ನಮ್ಮ ಮತ್ತು ಭೂಮಿಯ ಮೇಲಿರುವ ಬೇರೆಲ್ಲಾ ಜೀವಿಗಳ ಬದುಕನ್ನೂ ವರ್ಧಿಸಲು ಬಳಸುವಂತಹ ಜನರನ್ನು ಬೆಳೆಸುವುದು ಮುಖ್ಯ. ಈಗಾಗಲೇ ಆಗುತ್ತಿರುವ ಹಾಗೆ ನಮಗೂ ಮತ್ತು ನಮ್ಮ ಸುತ್ತಲೂ ಇರುವುದೆಲ್ಲದಕ್ಕೂ ವಿನಾಶಕಾರಿಯಾಗುವ ರೀತಿಯಲ್ಲಲ್ಲ; ನಮಗೂ ಮತ್ತೆಲ್ಲರಿಗೂ ಕಷ್ಟ ಮತ್ತು ದುಃಖವನ್ನು ಉಂಟು ಮಾಡುವ ರೀತಿಯಲ್ಲಲ್ಲ.

ನೀವು ಗಮನಿಸಿರಬಹುದು, ಕೊನೆಯ ಎರಡು, ಮೂರು ಬೇಸಿಗೆಗಳು ಹಿಂದೆಂದಿಗಿಂತಲೂ ಬಿಸಿಯಾಗಿವೆ. ನೀವಿದನ್ನು ಹಿಮಾಲಯದಲ್ಲೂ ನೋಡಬಹುದು. ಭಾಗಿರಥಿ ನದಿ ಹುಟ್ಟುವ ಗೋಮುಖದಲ್ಲಿ, ನೀರು ಮಂಜಿನ ಗುಹೆಯ ಬಾಯಿಂದ ಕಾರಂಜಿಯ ಹಾಗೆ ಚಿಮ್ಮುತ್ತಿತ್ತು. ಈಗ ಮಂಜು ಎಷ್ಟರ ಮಟ್ಟಿಗೆ ಕರಗಿಹೋಗಿದೆಯೆಂದರೆ, ನೀವು ಗುಹೆಯೊಳಗೆ ಒಂದು ಮೈಲಿಯಷ್ಟು ನಡೆಯಬಹುದು, ಮತ್ತಲ್ಲಿ ನೀರು ಒಂದು ಸಣ್ಣ ಜರಿಯ ಹಾಗೆ ಅದರಿಂದ ಹೊರಬರುತ್ತಿದೆ. ವರ್ಷದುದ್ದಕ್ಕೂ ಮಂಜಿನಿಂದ ಆವೃತವಾಗಿರುತ್ತಿದ್ದ ಹಲವು ಶಿಖರಗಳು ಈಗ ಹಾಗಿರುವುದೇ ಇಲ್ಲ. ಕಾವೇರಿ ನದಿಯು ವರ್ಷದ ಸುಮಾರು ಮೂರು ತಿಂಗಳು ಸಮುದ್ರದವರೆಗೂ ಹರಿಯುವುದೇ ಇಲ್ಲ. ಒಂದೇ ತಲೆಮಾರಿನಲ್ಲಿ, ಸಾವಿರಾರು ವರ್ಷಗಳ ಕಾಲದಿಂದ ಸಾರ್ವಕಾಲಿಕವಾಗಿದ್ದ ನದಿಯನ್ನು ನಿಯತಕಾಲಿಕ ನದಿಯನ್ನಾಗಿ ಮಾಡಿದ್ದೇವೆ. ಇದರೆಲ್ಲದರ ಅರ್ಥವಿದು: ನಮ್ಮ ಬಳಿಯಿರುವ ವಿಜ್ಞಾನ ಮತ್ತು ತಂತ್ರಜ್ಞಾನವು ಜವಾಬ್ದಾರಿ ಇಲ್ಲದವರ ಕೈಯಲ್ಲಿದೆ. ನಮಗೆ ಬೇಕಿರುವುದು ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯಲ್ಲ, ಬದಲಾಗಿ, ಮಾನವರ ವ್ಯಕ್ತಿಗತ ರೂಪಾಂತರ. ಬರುವ ದಶಕದಲ್ಲಿ ಸ್ವಯಂ-ರೂಪಾಂತರದ ಸಾಧನೆಗಳನ್ನು ದೊಡ್ಡದಾಗಿ ಪ್ರಸರಿಸದಿದ್ದರೆ, ನಮ್ಮ ಮಕ್ಕಳು ಜಗತ್ತಿನಲ್ಲಿ ಚೆನ್ನಾಗಿ ಬದುಕುವುದು ಹೆಚ್ಚು ಹೆಚ್ಚು ಕಷ್ಟಕರವಾಗುತ್ತದೆ.

ಈ ತಲೆಮಾರಿನವರಾಗಿ, ಮುಂದಿನ ತಲೆಮಾರಿಗೆ ಇದನ್ನು ಸಾಧ್ಯವಾಗಿರುವ ಸುಯೋಗ ನಮ್ಮದಾಗಬೇಕೆನ್ನುವುದು ನನ್ನ ಹಾರೈಕೆ ಮತ್ತು ಆಶೀರ್ವಾದ.

ಈಗ ತಾನೇ ಹೊಸ ಸೌರ ಆವರ್ತನೆಯು ಆರಂಭಗೊಂಡಿದೆ. ಅನೇಕ ವಿಧಗಳಲ್ಲಿ, ಮುಂಬರುವ ಹನ್ನೆರಡು ವರ್ಷಗಳು ಭೂಮಿ ಮೇಲಿನ ಆಧ್ಯಾತ್ಮಿಕ ಬೆಳವಣಿಗೆಗೊಂದು ಸುವರ್ಣ ಯುಗವಾಗಿರುತ್ತದೆ. ಮುಂಬರುವ ದಶಕದಲ್ಲಿ ನಾವು ಸರಿಯಾದದ್ದನ್ನು ಮಾಡಿದರೆ, ಅದರ ಫಲವು ಸುಲಭವಾಗಿ ದೊರೆಯುತ್ತದೆ. ಇಂತಹ ಸಮಯಕ್ಕಾಗಿ ಮಾನವನ ಬುದ್ಧಿಮತ್ತೆಯು ಹಿಂದೆಂದಿಗಿಂತಲೂ ಸಿದ್ಧವಾಗಿದೆ. ಎಲ್ಲಾ ವಿಷಯಗಳು ಹೊಂದಾಣಿಕೆಯಾಗುತ್ತಿವೆ - ಆದಿಯೋಗಿಯ ಮೊಟ್ಟಮೊದಲಿಗೆ ಯೋಗ ವಿಜ್ಞಾನವನ್ನು ಪ್ರತಿಪಾದಿಸಿದಾಗ ಇದ್ದ ಸಂದರ್ಭವು, 2016 ರಲ್ಲಿಯೂ ಇರುತ್ತದೆ. ಇವೆಲ್ಲವೂ ನಮಗೆ ಒಳ್ಳೆಯದನ್ನೇ ಮಾಡುತ್ತವೆ. ಈ ತಲೆಮಾರಿನವರಾಗಿ, ಮುಂದಿನ ತಲೆಮಾರಿಗೆ ಇದನ್ನು ಸಾಧ್ಯವಾಗಿಸುವ ಸುಯೋಗ ನಮ್ಮದಾಗಬೇಕೆನ್ನುವುದು ನನ್ನ ಹಾರೈಕೆ ಮತ್ತು ಆಶೀರ್ವಾದ. ಇದು ಸಾಧ್ಯವಾಗುವಂತೆ ಮಾಡಲು ನಾವು ಆದಿಯೋಗಿಯನ್ನೊಂದು ಹೆಗ್ಗುರುತಾಗಿ ಮಾಡಬೇಕೆಂದಿದ್ದೇವೆ. ಅವನನ್ನು ನಾವು ದೇವರೆಂದು ಪ್ರಚಾರ ಮಾಡದೇ, ಯೋಗಿಯೆಂದು ಪ್ರಚುರಪಡಿಸುತ್ತಿದ್ದೇವೆ. ದೇವರೆಂದರೆ, ಅವನನ್ನು ಪೂಜಿಸಬೇಕು. ಯೋಗಿಯೆಂದರೆ, ಅವನೊಂದು ಸಾಧ್ಯತೆ. ಜಾತಿ, ಜನಾಂಗ, ಲಿಂಗ ಮತ್ತು ಮತಧರ್ಮವೆನ್ನದೇ, ಯಾರೇ ಬಂದರೂ ಅವರಿಗೆ ರೂಪಾಂತರದ ಸಾಧನೆಗಳನ್ನೊದಗಿಸುವ ಸ್ಥಳಗಳನ್ನು ನಾವು ನಿರ್ಮಿಸಬೇಕೆಂದಿದ್ದೇವೆ. ಮೊದಲನೆಯದು ಅಮೇರಿಕಾದ ಟೆನೆಸ್ಸಿಯಲ್ಲಿ ನಿರ್ಮಾಣವಾಗಿದೆ. ಪವಾಡಗಳನ್ನು ಮಾಡುವ ಸ್ಥಳವಲ್ಲ, ನಿವೇದನೆಯನ್ನು ಮಾಡುವ ಸ್ಥಳವಲ್ಲ - ಕೇವಲ ಸಾಧನೆಯನ್ನು ಮಾಡುವ ಸ್ಥಳ. ಹೀಗಿದ್ದರೂ, ದಿನದಿಂದ ದಿನಕ್ಕೆ ಅಲ್ಲಿಗೆ ಬರುವ ಜನಗಳ ಸಂಖ್ಯೆ ಹೆಚ್ಚಾಗುತ್ತಿದೆ.

ನಾವು ಅಗತ್ಯವಿರುವ ವಾತಾವರಣವನ್ನು ಸೃಷ್ಟಿಸಿದರೆ, ಜನರು ರೂಪಾಂತರದ ಸಾಧನೆಗಳನ್ನು ಕಲಿಯುವಂತಹ ಈ ರೀತಿಯ ಸ್ಥಳಗಳು ಜಗತ್ತಿನ ಎಲ್ಲಾ ಕಡೆಯೂ ಹುಟ್ಟಿಕೊಳ್ಳುತ್ತದೆ. ಅವಶ್ಯಕವಾದ ಶಕ್ತಿಯುತ ಸ್ಥಳಗಳನ್ನು ನಿರ್ಮಿಸಿದರೆ, ಜನರು ತಪ್ಪದೇ ಬರುತ್ತಾರೆ. ಇಂದು, ಹಿಂದೆಂದಿಗಿಂತಲೂ ಹೆಚ್ಚಿನ ಜನರು ಅರಸುತ್ತಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚಿನ ಜನರು, ಪ್ರಚುರಪಡಿಸಲಾಗುತ್ತಿರುವ ಎಲ್ಲಾ ನಂಬಿಕೆಯ ಕಟ್ಟುಪಾಡುಗಳ ಬಗ್ಗೆ, ನಿರಾಶರಾಗುತ್ತಿದ್ದಾರೆ. ಅವರಿಗಿದು ಸರಿಯಲ್ಲವೆಂದು ತಿಳಿದಿದ್ದರೂ, ಒಂದು ದೊಡ್ಡ ಜನಸಮೂಹವಿನ್ನೂ ಅವರ ನಂಬಿಕೆ ಕಟ್ಟುಪಾಡಿಗೆ ಬದ್ಧರಾಗಿದ್ದಾರೆ, ಏಕೆಂದರೆ ಅವರಿನ್ನೂ ಉತ್ತಮ ಪರ್ಯಾಯವನ್ನು ಕಂಡುಕೊಂಡಿಲ್ಲ. ಅವರು ಉತ್ತಮ ಪರ್ಯಾಯವನ್ನು ಕಂಡುಕೊಳ್ಳುತ್ತಾರೆಂದು ಖಚಿತಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ, ಏಕೆಂದರೆ ಪ್ರಪಂಚದ ಯೋಗಕ್ಷೇಮವೇ ಇದರ ಮೇಲೆ ನಿಂತಿದೆ.

ನಮಗೆ ಶಾಂತಿಯುತ ಪ್ರಪಂಚ ಬೇಕಿದ್ದಲ್ಲಿ, ಶಾಂತಿಯುತ ಜನರಿರಬೇಕು. ನಮಗೆ ಪ್ರೀತಿ ತುಂಬಿದ ಪ್ರಪಂಚ ಬೇಕಿದ್ದಲ್ಲಿ, ಪ್ರೀತಿಸುವ ಜನರಿರಬೇಕು. ನಮಗೆ ವಿವೇಚನಯುತ ಪ್ರಪಂಚ ಬೇಕಿದ್ದಲ್ಲಿ, ವಿವೇಕವಂತರಿರಬೇಕು. ಎಂತಹವರ ಜೊತೆ ನಮಗೆ ಬಾಳಬೇಕೋ, ಎಂತಹವರು ಈ ಭೂಮಿಯಲ್ಲಿ ನೆಲೆಸಬೇಕೋ, ಎಂತಹವರೊಂದಿಗೆ ನಮ್ಮ ಮಕ್ಕಳು ಬಾಳಬೇಕೋ ಅಂತಹ ಜನರನ್ನು ಸೃಷ್ಟಿಸುವಲ್ಲಿ ನಮಗೆ ಆಸಕ್ತಿಯಿದ್ದರೆ, ಮುಂದಿನ ಹತ್ತು ಹನ್ನೆರಡು ವರ್ಷಗಳಲ್ಲಿ, ಪ್ರತಿಯೊಂದು ಮಗುವಿಗೂ ಹತ್ತು ವರ್ಷಗಳಾಗುವ ಮುನ್ನ, ಅವರುಗಳು ಕನಿಷ್ಠ ಏಳರಿಂದ ಹತ್ತು ನಿಮಿಷಗಳವರೆಗೆ ಕಣ್ಣು ಮುಚ್ಚಿ ಕುಳಿತುಕೊಳ್ಳುವಂತಹ ಸರಳ ಪ್ರಕ್ರಿಯೆಯನ್ನು ಕಲಿಯಬೇಕೆಂದು ನಾವು ಖಾತರಿಪಡಿಸಿಕೊಳ್ಳಬೇಕು. ಜಗತ್ತಿನಲ್ಲಿರುವವರೆಲ್ಲರೂ ಸ್ವಯಂ-ರೂಪಾಂತರದ ಸರಳ ಸಾಧನೆಯನ್ನು ಕಲಿತಿರಬೇಕು. ನಾವಿದನ್ನು ಅವರ ಜೀವನದಲ್ಲಿ ತರದ ಹೊರತು, ಜಗತ್ತಿನಲ್ಲಿ ಹಿಂಸಾಚಾರ ಮತ್ತು ದುರಂತವು ಮುಂದುವರೆಯುವುದಲ್ಲದೆ, ಹಲವು ಪಟ್ಟು ಹೆಚ್ಚಾಗುತ್ತದೆ. 2050 ರ ಹೊತ್ತಿಗೆ, ಭೂಮಿಯಲ್ಲಿ 9.7 ಶತಕೋಟಿ ಜನರಿರುವ ನಿರೀಕ್ಷೆಯಿದೆ. ಜನಸಂದಣಿಯು ಹೆಚ್ಚಾದಂತೆಲ್ಲ, ಪರಿಸ್ಥಿತಿಗಳು ತೀವ್ರವಾಗುತ್ತವೆ. ನಾವು ಒಟ್ಟೊಟ್ಟಿಗೆ ಹತ್ತಿರದಲ್ಲಿರಬೇಕೆಂದರೆ, ಜನರು ಸ್ನೇಹಪರ, ಶಾಂತಿಯುತ ಮತ್ತು ಆನಂದಭರಿತರಾಗಿರುವುದು ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿಯೇ ರೂಪಾಂತರದ ಸಾಧನೆಗಳು ಅತೀ ಮಹತ್ವದ್ದಾಗಿವೆ.

ನೀವೆಲ್ಲರೂ ಹೇಗಾದರೂ ಮಾಡಿ ಆದಿಯೋಗಿಯ ಅನಾವರಣದ ಬಗ್ಗೆ ಪ್ರತಿಯೊಬ್ಬರೂ ತಿಳಿಯುವಂತೆ ಮಾಡಬೇಕು. ಅವನ ಮುಖ ನೋಡಿದಾಕ್ಷಣ ಎಲ್ಲರೂ ಯೋಗವನ್ನು ಮಾಡದೇ ಇರಬಹುದು, ಆದರೆ "ಆದಿಯೋಗಿ" ಎನ್ನುವುದು ನಿಧಾನವಾಗಿ ಅವರ ಮೇಲೆ ಕೆಲಸ ಮಾಡುತ್ತದೆ. ಹೆಚ್ಚು ಆನಂದಭರಿತ ಮನುಷ್ಯರನ್ನು ಸೃಷ್ಟಿಸಲು ಕೆಲಸ ನಡೆಯುತ್ತಿದೆಯೆಂದು ಇಡೀ ಜಗತ್ತಿಗೆ ತಿಳಿಯಬೇಕು. ಯಾವುದೇ ತಲೆಮಾರಾದರೂ ಮಾಡಬೇಕಾದ ಮೂಲಭೂತ ವಿಷಯವಿದು: ಈ ಜಗತ್ತು ನಮಗೆ ದೊರಕ್ಕಿದ್ದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಅದನ್ನು ಬಿಟ್ಟುಹೋಗುವುದು. ಪರಿಸರದ ವಿಷಯದಲ್ಲಂತೂ, ನಮ್ಮ ಜೀವಿತಾವಧಿಯಲ್ಲಿ ನಡೆದ ವಿನಾಶವನ್ನು ಹಿಮ್ಮೊಗವಾಗಿ ತಿರುಗಿಸಲು ಸಾಧ್ಯವಾಗುವುದಿಲ್ಲ. ಆದರೆ, ಕಡೆ ಪಕ್ಷ ಜನರನ್ನಾದರೂ ಉತ್ತಮ ಸ್ಥಿತಿಯಲ್ಲಿ ಬಿಟ್ಟುಹೋಗಬಹುದು. ಜನರು ಶಾಂತಿ ಮತ್ತು ಆನಂದದಿಂದಿದ್ದರೆ, ಅವರು ಪರಿಸರವನ್ನು ಸರಿಪಡಿಸುವರೆಂದು ನನಗೆ ಖಾತ್ರಿಯಿದೆ. ಬನ್ನಿ, ಇದನ್ನು ಸಾಧ್ಯವಾಗಿಸೋಣ.

ಮಹಾಶಿವರಾತ್ರಿ 2022 – ವೆಬ್ ನೇರ ಪ್ರಸಾರದಲ್ಲಿ ವೀಕ್ಷಿಸಿ

    Share

Related Tags

ಆದಿಯೋಗಿ

Get latest blogs on Shiva

Related Content

Embrace Shiva, Embrace Life