logo
logo

ಮಹಾಶಿವರಾತ್ರಿಯನ್ನು ಏಕೆ ಆಚರಿಸಲಾಗುತ್ತದೆ? ಮತ್ತು ಮಹಾಶಿವರಾತ್ರಿಯ ಮಹತ್ವ

ಮಹಾಶಿವರಾತ್ರಿಯು ಭಾರತದ ಪಂಚಾಂಗದಲ್ಲಿ ಅತ್ಯಂತ ಮಹತ್ವದ ಆಚರಣೆಯಾಗಿದೆ. ಈ ರಾತ್ರಿಯು ಏತಕ್ಕಾಗಿಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ನಾವಿದನ್ನು ಹೇಗೆ ಬಳಸಿಕೊಳ್ಳಬಹುದೆಂದು ಸದ್ಗುರುಗಳು ವಿವರಿಸುತ್ತಾರೆ.

ಸದ್ಗುರು: ಒಂದು ಕಾಲದಲ್ಲಿ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ವರ್ಷದ ಮುನ್ನೂರ ಅರವತ್ತೈದು ದಿನಗಳೂಹಬ್ಬಗಳಿರುತ್ತಿದ್ದವು. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ವರ್ಷದ ಪ್ರತಿದಿನವನ್ನೂ ಆಚರಿಸಲು ಅವರಿಗೊಂದು ನೆಪಬೇಕಿತ್ತಷ್ಟೆ. ಈ ಮುನ್ನೂರ ಅರವತ್ತೈದು ಹಬ್ಬಗಳನ್ನು ಬೇರೆ ಬೇರೆ ಕಾರಣಗಳಿಗೆ ಮತ್ತು ಜೀವನದ ಬೇರೆ ಬೇರೆ ಉದ್ದೇಶಗಳಿಗೆಆಚರಿಸಲಾಗುತ್ತಿತ್ತು. ನಾನಾ ರೀತಿಯ ಐತಿಹಾಸಿಕ ಘಟನೆಗಳು, ಗೆಲುವುಗಳು, ಅಥವಾ ಜೀವನದ ನಿರ್ದಿಷ್ಟ ಸಂದರ್ಭಗಳಾದ ಬಿತ್ತನೆ,ನಾಟಿ ಮತ್ತು ಕೊಯ್ಲು ಮಾಡುವುದನ್ನು ಸಂಭ್ರಮಿಸಲು ಆ ಹಬ್ಬಗಳನ್ನು ಆಚರಿಸುತ್ತಿದ್ದರು. ಹೀಗೆ, ಪ್ರತಿ ಸಂದರ್ಭಕ್ಕೂ ಒಂದುಹಬ್ಬವಿರುತ್ತಿತ್ತು. ಆದರೆ ಮಹಾಶಿವರಾತ್ರಿಯು ಬೇರೆಯದ್ದೇ ಪ್ರಾಮುಖ್ಯತೆಯನ್ನು ಹೊಂದಿದೆ.

ಮಹಾಶಿವರಾತ್ರಿಯು ಪಾರಮಾರ್ಥಿಕತೆಯನ್ನು ಬಯಸುವ ಎಲ್ಲರಿಗೂ ಬಹಳ ಮಹತ್ವದ್ದಾಗಿದೆ. ಈ ರಾತ್ರಿ ನಿಮಗೆ ಉತ್ಸಾಹಭರಿತ ಜಾಗೃತಿಯಾಗಲಿ.

- ಸದ್ಗುರು

ಪ್ರತಿ ಚಾಂದ್ರಮಾಸದ ಹದಿನಾಲ್ಕನೇ ರಾತ್ರಿ ಅಥವಾ ಅಮಾವಾಸ್ಯೆಯ ಹಿಂದಿನ ರಾತ್ರಿಯನ್ನು ಶಿವರಾತ್ರಿಯೆಂದು ಕರೆಯಲಾಗುತ್ತದೆ.ಒಂದು ವರ್ಷದಲ್ಲಿ ಸಂಭವಿಸುವ ಎಲ್ಲಾ ಹನ್ನೆರಡು ಶಿವರಾತ್ರಿಗಳಲ್ಲಿ, ಫೆಬ್ರವರಿ-ಮಾರ್ಚಿಯಲ್ಲಿ ಬರುವ ಮಹಾಶಿವರಾತ್ರಿಯುಹೆಚ್ಚಿನ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ರಾತ್ರಿಯಂದು, ಭೂಮಿಯ ಉತ್ತರ ಗೋಳಾರ್ಧದಲ್ಲಿ ಮನುಷ್ಯರಲ್ಲಿ ಶಕ್ತಿಯನೈಸರ್ಗಿಕವಾದ ಏರಿಕೆ ಉಂಟಾಗುತ್ತದೆ. ಈ ಸಮಯದಲ್ಲಿ ಪ್ರಕೃತಿಯು ಮನುಷ್ಯರನ್ನು ಅವರ ಆಧ್ಯಾತ್ಮಿಕ ಉತ್ತುಂಗಕ್ಕೆತಳ್ಳುತ್ತಿರುತ್ತದೆ. ನಾವಿದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿ ಎಂದೇ ನಮ್ಮ ಸಂಪ್ರದಾಯದಲ್ಲಿ, ರಾತ್ರಿಯಿಡೀ ಜರುಗುವಂತಹ ಒಂದು ಉತ್ಸವವನ್ನು ನಾವು ನಿಗದಿಪಡಿಸಿದ್ದೇವೆ. ರಾತ್ರಿ ಪೂರ್ತಿ ನಡೆಯುವ ಈ ಉತ್ಸವದ ಮೂಲಭೂತಅಂಶವೆಂದರೆ, ಸ್ವಾಭಾವಿಕವಾಗಿ ಏರುವ ಶಕ್ತಿಗೆ ಅದರ ದಾರಿಯನ್ನು ಕಂಡುಕೊಳ್ಳಲು ಅನುವು ಮಾಡಿಕೊಡುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಅದಕ್ಕಾಗಿ ನೀವು ನಿಮ್ಮ ಬೆನ್ನುಮೂಳೆಯನ್ನು ನೆಟ್ಟಗಿನ ಸ್ಥಿತಿಯಲ್ಲಿ ಇಟ್ಟುಕೊಂಡು,ಎಚ್ಚರವಾಗಿರಬೇಕಾಗುತ್ತದೆ.

ಆಧ್ಯಾತ್ಮಿಕ ಪಥದಲ್ಲಿರುವವರಿಗೆ ಮಹಾಶಿವರಾತ್ರಿಯು ಬಹಳ ಪ್ರಮುಖವಾದದ್ದು. ಕುಟುಂಬ ಜೀವನದಲ್ಲಿರುವವರಿಗೆ ಮತ್ತುಜಗತ್ತಿನಲ್ಲಿನ ಮಹತ್ವಾಕಾಂಕ್ಷಿಗಳಿಗೂ ಸಹ ಇದು ತುಂಬ ಮಹತ್ವವುಳ್ಳದ್ದಾಗಿದೆ. ಕುಟುಂಬಸ್ಥರು ಮಹಾಶಿವರಾತ್ರಿಯನ್ನು ಶಿವನಮದುವೆ ವಾರ್ಷಿಕೋತ್ಸವವಾಗಿ ಆಚರಿಸುತ್ತಾರೆ. ಲೌಕಿಕ ಮಹತ್ವಾಕಾಂಕ್ಷೆಗಳನ್ನು ಹೊಂದಿರುವವರು ಆ ದಿನವನ್ನು ಶಿವನು ತನ್ನ ಶತ್ರುಗಳನ್ನೆಲ್ಲಾ ಸದೆಬಡಿದ ದಿನವಾಗಿ ನೋಡುತ್ತಾರೆ.

ಆದರೆ ಆಧ್ಯಾತ್ಮಿಕ ಸಾಧಕರು, ಮುನಿಗಳು, ತಪಸ್ವಿಗಳು, ಯೋಗಿಗಳಿಗೆ ಮಹಾಶಿವರಾತ್ರಿಯು ಶಿವನು ಕೈಲಾಸ ಪರ್ವತದೊಂದಿಗೆ ಐಕ್ಯವಾದ ದಿನ. ಅವನು ಪರ್ವತದ ಹಾಗೆ ಸಂಪೂರ್ಣವಾಗಿ ನಿಶ್ಚಲನಾದ. ಯೋಗ ಪರಂಪರೆಯಲ್ಲಿ, ಶಿವನನ್ನು ಒಬ್ಬ ದೇವರೆಂದು ಪೂಜಿಸಲಾಗುವುದಿಲ್ಲ, ಆದರೆ ಯೋಗ ವಿಜ್ಞಾನದ ಉಗಮಕಾರಕ, ಆದಿ ಗುರು ಎಂದು ಪರಿಗಣಿಸಲಾಗುತ್ತದೆ. ಅನೇಕ ಸಹಸ್ರಮಾನಗಳ ಧ್ಯಾನದ ನಂತರ, ಒಂದು ದಿನ ಅವನು ಸಂಪೂರ್ಣವಾಗಿ ಅಚಲನಾದನು. ಆ ದಿನವೇ ಮಹಾಶಿವರಾತ್ರಿ. ಅವನಲ್ಲಿನ ಎಲ್ಲಾ ಚಲನೆಗಳೂ ನಿಂತುಹೋಗಿ, ಅವನು ಅತ್ಯಂತ ಅಚಲನಾದನು. ಆದ್ದರಿಂದ ಯೋಗಿಗಳು ಮಹಾಶಿವರಾತ್ರಿಯನ್ನು ಅಚಲತೆಯ ರಾತ್ರಿಯಾಗಿ ನೋಡುತ್ತಾರೆ.

ದಂತಕಥೆಗಳನ್ನು ಹೊರತುಪಡಿಸಿ, ಯೋಗ ಸಂಪ್ರದಾಯದಲ್ಲಿ ಈ ದಿನ ಹಾಗೂ ರಾತ್ರಿಯನ್ನು ಏಕಿಷ್ಟು ಮುಖ್ಯವಾಗಿ ಕಾಣುತ್ತಾರೆಂದರೆ ಆಧ್ಯಾತ್ಮಿಕ ಅನ್ವೇಷಕರಿಗೆ ಅದು ನೀಡುವ ಅಗಾಧವಾದ ಸಾಧ್ಯತೆಗಳ ಕಾರಣಕ್ಕೆ. ಆಧುನಿಕ ವಿಜ್ಞಾನವು ಹಲವು ಹಂತಗಳ ಪ್ರಯೋಗಗಳ ಮೂಲಕ ಹಾದು ಹೋಗಿ, ನೀವಿಂದು ತಿಳಿದಿರುವ ಎಲ್ಲ ಜೀವಗಳೂ, ದ್ರವ್ಯಪದಾರ್ಥ ಮತ್ತು ಅಸ್ತಿತ್ವವೆಲ್ಲವೂ, ಬ್ರಹ್ಮಾಂಡ ಹಾಗೂ ಎಲ್ಲ ಆಕಾಶಗಂಗೆಗಳೂ ಕೋಟ್ಯಂತರ ರೀತಿಗಳಲ್ಲಿ ಅಭಿವ್ಯಕ್ತವಾಗಿರುವ ಒಂದೇ ಒಂದು ಶಕ್ತಿ ಎಂದು ಸಾಬೀತುಪಡಿಸುವ ಹಂತಕ್ಕೆ ಬಂದು ತಲುಪಿದೆ.

ಈ ವೈಜ್ಞಾನಿಕ ವಾಸ್ತವಾಂಶವು ಪ್ರತಿಯೊಬ್ಬ ಯೋಗಿಯಲ್ಲೂ ಒಂದು ಅನುಭವಾತ್ಮಕ ಸತ್ಯವಾಗಿದೆ. “ಯೋಗಿ” ಎಂಬ ಪದದ ಅರ್ಥ ಅಸ್ತಿತ್ವದ ಏಕತೆಯನ್ನು ಸಾಕ್ಷಾತ್ಕರಿಸಿಕೊಂಡವನು ಎಂದು. ನಾನು “ಯೋಗ” ಎಂದು ಹೇಳಿದಾಗ, ನಾನು ಯಾವುದೇ ಒಂದು ನಿರ್ದಿಷ್ಟವಾದ ಅಭ್ಯಾಸ ಅಥವಾ ವ್ಯವಸ್ಥೆಯ ಕುರಿತಾಗಿ ಹೇಳುತ್ತಿಲ್ಲ. ಅಪರಿಮಿತವಾದುದ್ದನ್ನು ತಿಳಿಯಲು, ಅಸ್ತಿತ್ವದಲ್ಲಿನ ಏಕತೆಯನ್ನು ಅನುಭವಿಸಲು ಇರುವ ತೀವ್ರವಾದ ಹಾತೊರೆಯುವಿಕೆಯೇ ಯೋಗ. ಮಹಾಶಿವರಾತ್ರಿಯ ರಾತ್ರಿಯು ಈ ಏಕತೆಯನ್ನು ಅನುಭವಿಸುವ ಸದವಕಾಶವನ್ನು ನಮಗೆ ನೀಡುತ್ತದೆ.