ಮಹಾಶಿವರಾತ್ರಿಯಂದು ರಾತ್ರಿಯಿಡೀ ನಡೆಯುವ ಸಂಭ್ರಮಭರಿತ ಉತ್ಸವವನ್ನು ಈ ವರ್ಷದ ಮಾರ್ಚ್ 4 ರಂದು ಈಶ ಯೋಗ ಕೇಂದ್ರದಲ್ಲಿ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ತಯಾರಿಯ ಅಂಗವಾಗಿ, ಅಸಾಧಾರಣ ಆಧ್ಯಾತ್ಮಿಕ ಸಾಧ್ಯತೆಗಳ ಈ ರಾತ್ರಿಯ ಕುರಿತಾದ 5 ವಿಶೇಷ ಸಂಗತಿಗಳನ್ನು ನಾವಿಲ್ಲಿ ನಿಮಗೆ ಪ್ರಸ್ತುತಪಡಿಸುತ್ತಿದ್ದೇವೆ.

#1 ಶಿವರಾತ್ರಿಯಂದು ಮಾನವ ವ್ಯವಸ್ಥೆಯಲ್ಲಿ ಶಕ್ತಿಯು ನೈಸರ್ಗಿಕವಾಗಿಯೇ ಮೇಲ್ಮುಖವಾಗಿ ಹರಿಯುತ್ತದೆ  

ಸದ್ಗುರು: ಪ್ರತಿ ಚಾಂದ್ರಮಾನದ ಹದಿನಾಲ್ಕನೇ ರಾತ್ರಿ ಅಥವಾ ಅಮಾವಾಸ್ಯೆಯ ಹಿಂದಿನ ರಾತ್ರಿಯನ್ನು ಶಿವರಾತ್ರಿಯೆಂದು ಕರೆಯಲಾಗುತ್ತದೆ. ಆ ದಿನದಂದು, ಮನುಷ್ಯರ ಶಕ್ತಿ ವ್ಯವಸ್ಥೆಯಲ್ಲಿ ನೈಸರ್ಗಿಕವಾದ ಏರಿಕೆ ಉಂಟಾಗುತ್ತದೆ. ಮಾಘ ಮಾಸದಲ್ಲಿ ಬರುವ ಶಿವರಾತ್ರಿಯನ್ನು ಮಹಾಶಿವರಾತ್ರಿಯೆಂದು ಕರೆಯಲಾಗುತ್ತದೆ. ಏಕೆಂದರೆ ಆ ದಿನದಂದು, ನಮ್ಮ ಮಾನವ ವ್ಯವಸ್ಥೆಯಲ್ಲಿನ ಚೈತನ್ಯ ಅಥವಾ ಶಕ್ತಿಯನ್ನು ಮೇಲಿನ ಹಂತಗಳಿಗೆ ಕೊಂಡೊಯ್ಯಲು ಪ್ರಕೃತಿಯ ನೆರವು ಲಭ್ಯವಿರುತ್ತದೆ. ಯೋಗ ಮತ್ತು ಆಧ್ಯಾತ್ಮಿಕ ಪ್ರಕ್ರಿಯೆಯ ಸಂಪೂರ್ಣ ವ್ಯವಸ್ಥೆಯು, ಮಾನವರನ್ನು ಅವರ ಮಿತಿಗಳಿಂದ ಅಪರಿಮಿತಕ್ಕೆ ವರ್ಧಿಸುವ ಬಗ್ಗೆಯಾಗಿದೆ. ಈ ವರ್ಧನೆ ಸಾಧ್ಯವಾಗಲು ಅತ್ಯಂತ ಮೂಲಭೂತ ಪ್ರಕ್ರಿಯೆಯೆಂದರೆ - ಶಕ್ತಿಯ ಸಕ್ರಿಯಗೊಳಿಸುವಿಕೆ ಹಾಗೂ ಅದರ ಮೇಲ್ಮುಖ ಚಲನೆ. ಹಾಗಾಗಿ, ತಾವು ಈಗಿರುವ ಸ್ಥಿತಿಯಿಂದ ಮೇಲಕ್ಕೆ ಏರುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಎಲ್ಲರಿಗೂ, ಶಿವರಾತ್ರಿ ಮಹತ್ವದ್ದಾಗಿದೆ, ಅದರಲ್ಲೂ ಮಹಾಶಿವರಾತ್ರಿಯು, ನಿರ್ದಿಷ್ಟವಾಗಿ ಇನ್ನೂ ಹೆಚ್ಚು ಮಹತ್ವದ್ದಾಗಿದೆ.

#2 ವಿಭಿನ್ನ ಜನರಿಗೆ ಇದು ವಿಭಿನ್ನ ಮಹತ್ವವನ್ನು ಹೊಂದಿದೆ

ಸದ್ಗುರು: ಮಹಾಶಿವರಾತ್ರಿಯು ಬಹಳಷ್ಟು ರೀತಿಗಳಲ್ಲಿ ಗಮನಾರ್ಹವಾಗಿದೆ. ಸಂಸಾರಸ್ಥರು ಮಹಾಶಿವರಾತ್ರಿಯನ್ನು ಶಿವನ ಮದುವೆಯ ವಾರ್ಷಿಕೋತ್ಸವವಾಗಿ ಆಚರಿಸುತ್ತಾರೆ. ಆಧ್ಯಾತ್ಮಿಕ ಸಾಧಕರು, ಮುನಿಗಳು, ತಪಸ್ವಿಗಳು ಹಾಗೂ ಯೋಗಿಗಳು, ಮಹಾಶಿವರಾತ್ರಿಯನ್ನು ಶಿವ ಕೈಲಾಸದೊಂದಿಗೆ ಒಂದಾದ ದಿನವಾಗಿ, ಅವನು ಅಚಲೇಶ್ವರನಾಗಿ ಪರ್ವತದೊಂದಿಗೆ ಲೀನವಾದ ದಿನವಾಗಿ ನೋಡುತ್ತಾರೆ. ಸಹಸ್ರಾರು ವರ್ಷಗಳ ಧ್ಯಾನದ ನಂತರ, ಅವನು ಪರ್ವತದಂತೆಯೇ ಅಚಲವಾಗಿ, ತನ್ನೆಲ್ಲಾ ಜ್ಞಾನವನ್ನು ಕೈಲಾಸ ಪರ್ವತದಲ್ಲಿ ಸಂರಕ್ಷಿಸಿ, ಅದರ ಒಂದು ಭಾಗವೇ ಆಗಿಹೋಗುತ್ತಾನೆ. ಆದ್ದರಿಂದ ಯೋಗಿಗಳು ಮಹಾಶಿವರಾತ್ರಿಯನ್ನು ಸ್ಥಿರತೆಯ ದಿನವಾಗಿ ನೋಡುತ್ತಾರೆ. ಲೌಕಿಕ ಮಹತ್ವಾಕಾಂಕ್ಷೆಗಳನ್ನು ಹೊಂದಿರುವವರು ಆ ದಿನವನ್ನು, ಶಿವನು ತನ್ನೆಲ್ಲಾ ಶತ್ರುಗಳನ್ನು ವಶಪಡಿಸಿಕೊಂಡ ದಿನವಾಗಿ ನೋಡುತ್ತಾರೆ.

#3 ರಾತ್ರಿಯಿಡೀ ಬೆನ್ನುಹುರಿಯನ್ನು ನೆಟ್ಟಗೆ ಇಟ್ಟುಕೊಳ್ಳುವುದು ಅನೇಕ ಸಾಧ್ಯತೆಗಳನ್ನು ತೆರೆಯುತ್ತದೆ

ಸದ್ಗುರು: ದಂತಕಥೆಗಳೇನೇ ಇರಲಿ, ಈ ಮಹಾಶಿವರಾತ್ರಿಯ ಮಹತ್ವವೆಂದರೆ ಆ ದಿನದಂದು ಮನುಷ್ಯರ ದೇಹದಲ್ಲಿನ ಶಕ್ತಿ ಮೇಲ್ಮುಖವಾಗಿ ಹರಿಯುವುದು. ಆದ್ದರಿಂದ ಆ ರಾತ್ರಿಯಂದು, ನಮ್ಮ ಬೆನ್ನುಹುರಿಯನ್ನು ನೆಟ್ಟಗಿರಿಸಿಕೊಂಡು, ಪೂರ್ಣವಾದ ಅರಿವಿನೊಂದಿಗೆ ಜಾಗರಣೆ ಮಾಡಬೇಕೆಂದು ನಾವು ಹೇಳುತ್ತೇವೆ. ನಾವೇನೇ ಸಾಧನೆಯನ್ನು ಮಾಡುತ್ತಿದ್ದರೂ, ಅಂದಿನ ದಿನ ಪ್ರಕೃತಿಯ ಕಡೆಯಿಂದ ನಮಗೆ ಅಪಾರವಾದ ನೆರವು ದೊರೆಯುತ್ತದೆ. ಮನುಷ್ಯರ ಎಲ್ಲಾ ವಿಕಸನವು, ಮೂಲಭೂತವಾಗಿ ಶಕ್ತಿಯ ಮೇಲ್ಮುಖ ಚಲನೆಯಿಂದಲೇ ಆಗಿದೆ. ಒಬ್ಬ ಆಧ್ಯಾತ್ಮಿಕ ಸಾಧಕ ಮಾಡುವ ಪ್ರತಿ ಅಭ್ಯಾಸ, ಪ್ರತಿ ಸಾಧನವೂ ಸಹ, ತನ್ನ ಶಕ್ತಿಯನ್ನು ಮೇಲ್ಮುಖವಾಗಿ ಚಲಿಸುವಂತೆ ಮಾಡಲು ಮಾತ್ರವೇ ಆಗಿರುತ್ತದೆ.

#4 ರಾತ್ರಿಯುದ್ದಕ್ಕೂ ನಡೆಯುವ ಸಂಗೀತ, ನೃತ್ಯಗಳಿಂದ ಕೂಡಿದ ಹಬ್ಬವಾಗಿ ಆಚರಿಸಲಾಗುತ್ತದೆ 

ಈಶ ಯೋಗ ಕೇಂದ್ರದಲ್ಲಿ ರಾತ್ರಿ ಪೂರ್ತಿ ಜರುಗುವ ಸಡಗರದ ಉತ್ಸವವು ಮಹಾಶಿವರಾತ್ರಿಯ ಅನುಭವವನ್ನು ಹೊಂದಲು ಅತ್ಯುತ್ತಮವಾದ ಪರಿಸರವನ್ನು ಸೃಷ್ಟಿಸುತ್ತದೆ. ಶಕ್ತಿಯುತ ಧ್ಯಾನಪ್ರಕ್ರಿಯೆಗಳು ಹಾಗೂ ಪ್ರಸಿದ್ಧ ಕಲಾವಿದರುಗಳಿಂದ ಅದ್ಭುತವಾದ ಸಂಗೀತ ಪ್ರದರ್ಶನಗಳು ಆ ರಾತ್ರಿ ನಡೆಯಲಿದ್ದು, ಲಕ್ಷಾಂತರ ಜನರನ್ನದು ಆಕರ್ಷಿಸುತ್ತದೆ. ಸದ್ಗುರುಗಳ ಉಪಸ್ಥಿತಿಯಲ್ಲಿ, ಈ ಅಪ್ರತಿಮವಾದ ಗಂಧರ್ವೋಪಮ ವಾತಾವರಣವು, ಮಹಾಶಿವರಾತ್ರಿಯ ಅಗಾಧ ಆಧ್ಯಾತ್ಮಿಕ ಸಾಧ್ಯತೆಗಳನ್ನು ನಿಮಗಾಗಿ ತೆರೆದಿಡುತ್ತದೆ. ಅಂತರ್‌ರಾಷ್ಟ್ರೀಯ ಖ್ಯಾತಿಯ ಸಂಗೀತ ಕಲಾವಿದರುಗಳ ಪ್ರದರ್ಶನಗಳು, ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಈಶದವರ ಸ್ವಂತ ಸಂಗೀತ ತಂಡ, ‘ಸೌಂಡ್ಸ್ ಆಫ್ ಈಶ’ದವರ ಪ್ರಸ್ತುತಿಗಳು ಈ ರಾತ್ರಿಯ ಉತ್ಸವದ ಕಳೆಯೇರಿಸಲಿವೆ.

#5 ಸದ್ಗುರುಗಳಿಂದ ಧ್ಯಾನಲಿಂಗದಲ್ಲಿ ಪಂಚಭೂತ ಆರಾಧನೆಯ ಕಾರ್ಯಕ್ರಮ

ಭೌತಿಕ ಶರೀರವೂ ಸೇರಿದಂತೆ, ಎಲ್ಲಾ ಸೃಷ್ಟಿಯ ಆಧಾರ ಪಂಚಭೂತಗಳಾಗಿವೆ. ಮಾನವ ವ್ಯವಸ್ಥೆಯೊಳಗಿರುವ ಈ ಐದು ತತ್ವಗಳನ್ನು ಶುದ್ಧೀಕರಿಸುವ ಮೂಲಕ ನಮ್ಮ ದೇಹ ಹಾಗೂ ಮನಸ್ಸಿನ ಸ್ವಾಸ್ಥ್ಯವನ್ನು ಸ್ಥಾಪಿಸಬಹುದಾಗಿದೆ. ಈ ಪ್ರಕ್ರಿಯೆಯು ದೇಹವನ್ನು ಒಂದು ಅಡಚಣೆಯಾಗಿಸುವ ಬದಲು ನಮ್ಮ ಪರಮ ಶ್ರೇಯಸ್ಸಿನ ಕಡೆಗೆ ಒಂದು ಮೆಟ್ಟಿಲಾಗುವಂತೆ ರೂಪಿಸುತ್ತದೆ. ಭೂತ ಶುದ್ಧಿ ಎಂದು ಕರೆಯಲಾಗುವ ಯೋಗದ ಒಂದಿಡೀ ವ್ಯವಸ್ಥೆಯೇ ಇದೆ, ಮತ್ತು ಇದರರ್ಥ ಪಂಚ ಭೂತಗಳನ್ನು ಶುದ್ಧೀಕರಿಸುವುದಾಗಿದೆ. ಮಹಾಶಿವರಾತ್ರಿಯಂದು ಧ್ಯಾನಲಿಂಗದಲ್ಲಿ ನಡೆಸಲಾಗುವ ಪಂಚಭೂತ ಆರಾಧನೆಯಿಂದ, ಸದ್ಗುರುಗಳು ಈ ಆಳವಾದ ಯೋಗ ವಿಜ್ಞಾನದಿಂದ ಪ್ರಯೋಜನ ಪಡೆಯುವ ವಿಶಿಷ್ಟವಾದ ಅವಕಾಶವನ್ನು ಭಕ್ತರಿಗಾಗಿ ತೆರೆದಿಟ್ಟಿದ್ದಾರೆ. ಇಲ್ಲದಿದ್ದರೆ ಇಂತಹ ಪ್ರಯೋಜನವನ್ನು ತೀವ್ರ ಸಾಧನೆಯಿಂದಷ್ಟೇ ಹೊಂದಬಹುದಾಗಿದೆ.

ಸಂಪಾದಕರ ಟಿಪ್ಪಣಿ: ಸದ್ಗುರು ಅವರ ಇಬುಕ್ Shiva - Ultimate Outlaw, ಹಾಗೂ ಪವಿತ್ರವಾದ ಮಂತ್ರಗಳಿರುವ Vairagya ಆಲ್ಬಮ್ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಿ!

Download Now