ಪುರಾಣ ಪುರುಷ ಕೃಷ್ಣನ ವಿಷಯದಲ್ಲಿ ಕಾಲತೀತವಾಗಿ ಸೀಮಾತೀತವಾಗಿ ಬದಲಾಗದೆ ಉಳಿದಿರುವ ಒಂದು ಅಂಶವೆಂದರೆ ’ನೀಲಿ’. ಕೃಷ್ಣನ ಬದ್ಧವೈರಿಗಳನ್ನೂ ಸಹ ತಡೆಯಲಸಾಧ್ಯವೆಂಬಷ್ಟು ಆಕರ್ಷಿಸಿದ್ದ ಈ ನೀಲಿ ಬಣ್ಣದ ಮಾಂತ್ರಿಕ ಶಕ್ತಿ ಏನೆಂದು ನೋಡೋಣ.

ಸದ್ಗುರು: ಎಲ್ಲವನ್ನೂ ತನ್ನ ವ್ಯಾಪ್ತಿಗೆ ಒಳಪಡಿಸಿಕೊಳ್ಳುವ ಬಣ್ಣವೇ ನೀಲಿ. ಈ ಅಸ್ತಿತ್ವದಲ್ಲಿ ಯಾವುದು ಅಗಾಧವೂ ನಿಮ್ಮ ಗ್ರಹಣ ಶಕ್ತಿಯನ್ನು ಮೀರಿದ್ದಂತಹದೂ ಆಗಿರುತ್ತದೆಯೋ ಅದು ಸಾಮಾನ್ಯವಾಗಿ ನೀಲಿ ಬಣ್ಣವಾಗಿರುತ್ತದೆ - ಅದು ಸಮುದ್ರವೂ ಆಗಬಹುದು, ಆಕಾಶವೂ ಆಗಬಹುದು. ಏಕೆಂದರೆ ನೀಲಿ ಬಣ್ಣವು ಸರ್ವವ್ಯಾಪಕತ್ವದ ತಳಹದಿ. ಈ ಕಾರಣದಿಂದಲೇ ಭಾರತದಲ್ಲಿ ಬಹಳಷ್ಟು ದಿವ್ಯವ್ಯಕ್ತಿಗಳನ್ನು ನೀಲಿಬಣ್ಣವೆಂಬಂತೆ ಬಿಂಬಿಸಲಾಗಿದೆ. ಶಿವನ ಮೈಬಣ್ಣ ನೀಲಿ. ಕೃಷ್ಣನ ಮೈಬಣ್ಣ ನೀಲಿ. ರಾಮನ ಮೈಬಣ್ಣವೂ ನೀಲಿ. ಅವರನ್ನು ಹಾಗೆ ಚಿತ್ರಿಸಿದ್ದೇಕೆಂದರೆ, ಅವರು ನೀಲಿ ಬಣ್ಣದ ಪ್ರಭಾವಳಿ (ಕಾಂತಿ, ಆರಾ) ಯನ್ನು ಹೊಂದಿದ್ದರು.

ಪ್ರಭಾವಳಿ ಎಂದರೇನು?

ಪ್ರತಿಯೊಂದು ಭೌತಿಕ ವಸ್ತುವಿನ ಸುತ್ತಲೂ ಇರುವ ಶಕ್ತಿಯ ಕ್ಷೇತ್ರವೇ ಪ್ರಭಾವಳಿ ಅಥವಾ ಆರಾ. ಇಡೀ ಅಸ್ತಿತ್ವವೇ ಶಕ್ತಿಯೆಂಬುದು ವೈಜ್ಞಾನಿಕ ಸಂಗತಿ. ಇದರಲ್ಲಿ ಒಂದು ಭಾಗ ಭೌತಿಕ ರೂಪದಲ್ಲಿ ಅಭಿವ್ಯಕ್ತಿಯನ್ನು ಪಡೆದಿದೆ. ಇನ್ನೊಂದು ಭಾಗವು ಭೌತಿಕ ರೂಪದಲ್ಲಿ ಅಭಿವ್ಯಕ್ತಿಯನ್ನು ಪಡೆಯದಿದ್ದರೂ ಅದಕ್ಕೊಂದು ರೂಪ ಇದೆ. ಯಾವುದು ಭೌತಿಕವಲ್ಲವೋ ಆದರೂ ರೂಪವನ್ನು ಹೊಂದಿದೆಯೋ ಅದು ಪ್ರಭಾವಳಿ.

ಕೃಷ್ಣ ನೀಲಿ ಬಣ್ಣದವನು ಎಂದಾಗ ಅವನ ಮೈಬಣ್ಣವೇ ನೀಲಿ ಎಂದಾಗಬೇಕಾಗಿಲ್ಲ. ಬಹುಶಃ ಅವನು ಕೃಷ್ಣ ಬಣ್ಣದವನಾಗಿದ್ದಿರಬಹುದು, ಆದರೆ ಹೆಚ್ಚು ಪ್ರಜ್ಞಾಪೂರ್ಣರಾಗಿದ್ದ ಜನರು ಅವನ ಪ್ರಭೆಯ ನೀಲಿ ಬಣ್ಣವನ್ನು ಗುರುತಿಸಿದರು, ಮತ್ತು ಅವನನ್ನು ’ನೀಲಮೇಘಶ್ಯಾಮ’ ಎಂದು ವರ್ಣಿಸಿದರು. ಕೃಷ್ಣನೆಂದರೆ ಯಾರು, ಏನು ಎಂಬುದರ ಬಗ್ಗೆ ಅನೇಕ ವಿವಾದಗಳು ಇದ್ದರೂ, ಎಲ್ಲವನ್ನೂ ಒಳಗೊಳ್ಳುವ ಅವನ ಸರ್ವವ್ಯಾಪಕತ್ವವನ್ನು ಮಾತ್ರ ಯಾರಿಂದಲೂ ನಿರಾಕರಿಸಲು ಸಾಧ್ಯವಿಲ್ಲ. ಆದುದರಿಂದ ಅವನ ನೀಲಿ ಬಣ್ಣವು ಹಾಗೇ ಉಳಿದು, ಕೃಷ್ಣನು ದೇಶದ ಮೂಲೆ ಮೂಲೆಗಳಲ್ಲಿಯೂ ಮೇಘ ಶ್ಯಾಮನಾಗಿಯೇ ಕಾಣಿಸಿಕೊಳ್ಳುತ್ತಾನೆ.

ತಡೆಯಲಸಾಧ್ಯವಾದ ನೀಲಿ ಬಣ್ಣ

ಕೃಷ್ಣನ ದಿವ್ಯ ಪ್ರಭೆಯ ಅತ್ಯಂತ ಹೊರಗಿನ ಆವಳಿಯು ನೀಲಿಯಾಗಿದ್ದುದರಿಂದ ಅವನು ತಡೆಯಲಸಾಧ್ಯವೆಂಬಷ್ಟು ಆಕರ್ಷಣೀಯವಾಗಿದ್ದ - ಅದು ಅವನ ಕಣ್ಣಿನ ಅಥವಾ ಮೂಗಿನ ಆಕಾರದಿಂದೇನೂ ಅಲ್ಲ. ಎಷ್ಟೋ ಜನರ ಮೂಗಿನ ಮಾಟ, ಕಣ್ಣಿನ ನೋಟ, ಅಂಗಸೌಷ್ಠವ ಸುಂದರವೆನಿಸಿದರೂ ಕೃಷ್ಣನಲ್ಲಿರುವ ಆಕರ್ಷಣೆಯ ಮಟ್ಟವನ್ನು ಸಮೀಪಿಸಲಾರರು. ಒಬ್ಬರ ಪ್ರಭಾವಳಿಯಲ್ಲಿನ ನೀಲಿಯೇ ಅವರನ್ನು ತಡೆಯಲಸಾಧ್ಯವೆಂಬಷ್ಟು ಆಕರ್ಷಣೀಯವಾಗಿಸುವುದು.

ಅವನ ಈ ನೀಲಿ ಪ್ರಭೆ, ಎಲ್ಲವನ್ನೂ ಒಳಗೂಡಿಸಿಕೊಳ್ಳುವಂತಹ ಗುಣ ಎಂತಹುದೆಂದರೆ, ಅವನ ಬದ್ಧವೈರಿಗಳೂ ಸಹ ಅವನೊಂದಿಗೆ ಕೂತು, ಅವರಿಗೇ ಅರಿಯದಂತೆ ತಮ್ಮನ್ನು ಕೃಷ್ಣನಿಗೆ ಅರ್ಪಿಸಿಕೊಳ್ಳುವಂತೆ ಮಾಡಿತು. ಅವನನ್ನು ನಿಂದಿಸಿ ಕೊಲ್ಲಲು ಹವಣಿಸಿದ್ದ ಎಷ್ಟೋ ಜನರನ್ನು ಅವನು ನಿರಾಯಾಸವಾಗಿ ಬದಲಾಗುವಂತೆ ಮಾಡಿದ್ದ. ಅವನಲ್ಲಿ ಹಲವಾರು ಮಾಹಾತ್ಮ್ಯಗಳಿವೆ, ಆದರೆ ಈ ನೀಲಿ ಬಣ್ಣವು ಅವನ ಎಲ್ಲ ಕಾರ್ಯಗಳಲ್ಲಿ ಅವನಿಗೆ ಸಹಕಾರವನ್ನು ನೀಡಿತು. ಕೊಲೆಪಾತಕಿ ಪೂತನಿ, ಮಗುವಾಗಿದ್ದಾಗಲೇ ಕೃಷ್ಣನನ್ನು ಕೊಲ್ಲಲೆಂದು ಬಂದವಳು. ಅವಳೂ ಕೂಡ ಅವನ ಪ್ರೇಮ ಪಾಶದಲ್ಲಿ ಬೀಳುವಂತೆ ಮಾಡಿದ್ದು ಇದೇ ದಿವ್ಯಪ್ರಭೆ. ಕೇವಲ ಕಲವೇ ನಿಮಿಷಗಳು ಪೂತನಿ ಕೃಷ್ಣನ ಜೊತೆಗಿದ್ದರೂ ಆಕೆ ಅವನ ನೀಲಿ ಮಾಂತ್ರಿಕತೆಯಲ್ಲಿ ಸಂಪೂರ್ಣವಾಗಿ ಬಿಡಿಸಿಕೊಳ್ಳಲಾರದಷ್ಟು ಸಿಲುಕಿದಳು.

ಮೈ ಝುಮ್ಮೆನಿಸುವ ನೀಲಿ

ಇದಕ್ಕೆ ಇನ್ನೊಂದು ಆಯಾಮವಿದೆ. ಒಬ್ಬರ ಆಂತರಿಕ ವಿಕಾಸದ ದೃಷ್ಟಿಯಿಂದ ನೋಡಿದಾಗ, ಆ ವ್ಯಕ್ತಿಯ ದಿವ್ಯಕಾಂತಿಯು ಅನೇಕ ವರ್ಣಗಳನ್ನು ಪಡೆದುಕೊಳ್ಳುತ್ತದೆ. ನಾವು ನಮ್ಮ ಸಾಧನೆಯಲ್ಲಿ ಆಜ್ಞಾ ಚಕ್ರಕ್ಕೆ ಪ್ರಾಮುಖ್ಯತೆ ಕೊಟ್ಟಾಗ ಕಿತ್ತಳೆ ಬಣ್ಣವು ಪ್ರಧಾನವಾಗುತ್ತದೆ. ಕಿತ್ತಳೆ ಬಣ್ಣವು ಸಂನ್ಯಾಸ, ತಪಸ್ಸು, ವೈರಾಗ್ಯ ಇತ್ಯಾದಿಗಳ ಪ್ರತೀಕ. ಯಾರಿಗಾದರೂ ಶ್ವೇತವರ್ಣದ ಪ್ರಭೆಯಿದ್ದರೆ, ಅದರರ್ಥ ಅವರೊಬ್ಬ ಪವಿತ್ರ ವ್ಯಕ್ತಿ. ಅಂತಹ ವ್ಯಕ್ತಿಯ ಸಾನ್ನಿಧ್ಯವು ಅದ್ಭುತವೆನಿಸುತ್ತದೆ. ಆದರೆ ಅವರು ಕರ್ಮದಲ್ಲಿ ಅಷ್ಟೊಂದು ನಿರತರಾಗಿರುವುದಿಲ್ಲ. ಯಾರಾದರೂ ಪ್ರಜ್ಞೆಯ ಉತ್ತುಂಗಕ್ಕೆ ಏರಿದ ನಂತರವೂ ಜಗತ್ತಿನಲ್ಲಿ ಕ್ರಿಯಾಶೀಲರಾಗಿರುವ ಆಯ್ಕೆಯನ್ನು ಮಾಡಿದರೆ, ಆತನ ಪ್ರಭೆಯು ಪ್ರಖರ ನೀಲಿ ವರ್ಣದ್ದಾಗಿರುತ್ತದೆ. ಕ್ರಿಯಾತ್ಮಕ ವ್ಯಕ್ತಿಗಳು ನೀಲಿ ವರ್ಣದ ಪ್ರಭೆಯವರು. ಈ ರೀತಿಯ ಪ್ರಭೆಯು ಇತರರಿಗೆ ಅತಿಮಾನುಷವೆಂದು ತೋರುವ ರೀತಿಯಲ್ಲಿ ನಿಮಗೆ ಜಗತ್ತಿನಲ್ಲಿ ಕಾರ್ಯಶೀಲವಾಗುವುದನ್ನು ಸಾಧ್ಯವಾಗಿಸುತ್ತದೆ.

ಆದರೆ ಚಿತ್ರಪಟದಲ್ಲಿ ಕೃಷ್ಣನ ಸುತ್ತಲೂ ನೀಲಿ ಬಣ್ಣವನ್ನು ತುಂಬುವ ಬದಲು ಅವನ ಮೈಬಣ್ಣವೇ ನೀಲಿ ಎಂದರು ಜನ. ಏಕೆಂದರೆ ಪ್ರಜ್ಞಾಪೂರ್ಣರಾದವರು ಅವನನ್ನು ನೋಡಿದಾಗ, ಅವನು ನೀಲಿ ಕಂಡನು. ಅದಷ್ಟೇ ಮುಖ್ಯವಾದ ವಿಚಾರ. ಈ ಅರಿವಿಲ್ಲದವರು ಅವನನ್ನು ನೋಡಿದಾಗ, ಕೇವಲ ಅವನ ಮೈಬಣ್ಣವನ್ನು ಕಂಡರು. ಇದು ಮುಖ್ಯವಲ್ಲ. ಕೃಷ್ಣನ ಬದುಕಿನ ಸತ್ಯಗಳು ಮುಖ್ಯವೇ ವಿನಃ ಅವನ ಬದುಕಿನ ಸಂಗತಿಗಳಲ್ಲ. ಏಕೆಂದರೆ ಸಂಗತಿಗಳು ನಮ್ಮ ಬದುಕಿನಲ್ಲಿ ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ, ಆದರೆ ಸತ್ಯವು ಬದುಕನ್ನು ಪರಿವರ್ತಿಸಬಲ್ಲದು.

ಸಂಪಾದಕರ ಟಿಪ್ಪಣಿ: ಲೀಲಾ ಸರಣಿಯನ್ನು ನೋಡಿ; ಇದರಲ್ಲಿ ಸದ್ಗುರುಗಳು ಕೃಷ್ಣನ ಬದುಕನ್ನು ಪರಿಶೋಧಿಸಿದ್ದಾರೆ.