ಯೋಗ ಶಾಸ್ತ್ರದ ಪ್ರಕಾರ ಮರಣದ ವಿವಿಧ ಹಂತಗಳ ಬಗ್ಗೆ ಮಾತನಾಡುತ್ತ ಸದ್ಗುರುಗಳು ಭಾರತೀಯ ಸಂಪ್ರದಾಯದಲ್ಲಿ ಮರಣಾನಂತರದ ವಿಧಿಯಾದ ಶ್ರಾದ್ಧದ ಮಹತ್ವವನ್ನು ಇಲ್ಲಿ ವಿವರಿಸುತ್ತಾರೆ.

ಪ್ರಶ್ನೆ: ಸದ್ಗುರುಗಳೇ, ವ್ಯಕ್ತಿಗಳು ಮರಣ ಹೊಂದಿದಾಗ ನೆರವೇರಿಸುವ ವಿಧಿಯಾದ ಶ್ರಾಧ್ದದ ಮಹತ್ವದ ಬಗ್ಗೆ ವಿವರಿಸುವಿರಾ?

ಸದ್ಗುರು: ನಮ್ಮ ದೇಶದಲ್ಲಿ, ನಿಮಗೆ ಹತ್ತಿರವಾದವರು ಸಾವನ್ನಪ್ಪಿದಾಗ, ನೀವು ಅವರ ದೇಹದ ಬಳಿ ಕುಳಿತು ನೋಡಿಕೊಳ್ಳುತ್ತಿರಬೇಕಿತ್ತು - ಯಾರೂ ಶವವನ್ನು ಒಂಟಿಯಾಗಿ ಬಿಟ್ಟುಹೋಗುತ್ತಿರಲಿಲ್ಲ. ನೀವು ಶವವನ್ನು ಎರಡು ಮೂರು ದಿನಗಳವರೆಗೆ ಹಾಗೆಯೇ ಇಟ್ಟರೆ, ಕೂದಲು ಬೆಳೆಯುತ್ತದೆ. ಗಂಡಸರ ಶವವಾಗಿದ್ದು, ಅವರು ನಿಯಮಿತವಾಗಿ ಕ್ಷೌರ ಮಾಡಿಕೊಳ್ಳುತ್ತಿದಿದ್ದರೆ, ಅವರ ಮುಖದ ಮೇಲೆ ಕೂದಲು ಬೆಳೆಯುವುದನ್ನು ಗಮನಿಸುವ ಮೂಲಕ ನೀವಿದನ್ನು ಪರೀಕ್ಷಿಸಬಹುದು. ಉಗುರು ಕೂಡ ಬೆಳೆಯುತ್ತದೆ. ಆದ್ದರಿಂದ, ಹೆಣವನ್ನು ಬಹಳ ಕಾಲದವರೆಗೆ ಸಂರಕ್ಷಿಸುವ ದೇಶಗಳಲ್ಲಿ, ಆ ಹೆಣವನ್ನು ನೋಡಿಕೊಳ್ಳುವವರು ಅದರ ಉಗುರನ್ನು ಕತ್ತರಿಸಿ, ಗಡ್ಡವನ್ನು ಕ್ಷೌರ ಮಾಡುತ್ತಾರೆ. ಮಾನವ ದೇಹದಲ್ಲಿ ಜೀವವು ಅಭಿವ್ಯಕ್ತವಾಗುವ ರೀತಿಯಿಂದಾಗಿ ಹೀಗಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಈ ರೀತಿಯಲ್ಲಿ ನೋಡೋಣ - ಮೂಲಭೂತ ಜೀವವೊಂದಿದೆ ಮತ್ತು ಭೌತಿಕ ಜೀವವೆನ್ನುವುದೊಂದಿದೆ. ನಾವು ಪ್ರಾಣ ಎಂದು ಕರೆಯುವ ಭೌತಿಕ ಪ್ರಾಣಶಕ್ತಿಯು, ಐದು ಮೂಲಭೂತ ಅಭಿವ್ಯಕ್ತಿಗಳನ್ನು ಹೊಂದಿದೆ. ಇವುಗಳನ್ನು ಸಮಾನ, ಪ್ರಾಣ, ಉದಾನ, ಅಪಾನ ಮತ್ತು ವ್ಯಾನ ಎಂದು ಕರೆಯಲಾಗುತ್ತದೆ.

ಮರಣದ ಹಂತಗಳು

ಒಬ್ಬ ವ್ಯಕ್ತಿಯು ಸತ್ತನೆಂದು ವೈದ್ಯರು ಘೋಷಿಸಿದ ಕ್ಷಣದಿಂದ 21 ರಿಂದ 24 ನಿಮಿಷಗಳಲ್ಲಿ "ಸಮಾನ" ನಿರ್ಗಮಿಸಲು ಪ್ರಾರಂಭಿಸುತ್ತದೆ. ಸಮಾನ ದೇಹದಲ್ಲಿನ ತಾಪಮಾನವನ್ನು ಕಾಪಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ಸಾವಿನ ಬಳಿಕ ನಡೆಯುವ ಮೊದಲ ವಿಷಯವೆಂದರೆ,  ಶರೀರವು ತಣ್ಣಗಾಗಲು ಶುರುವಾಗುವುದು. ಯಾರಾದರೂ ಬದುಕಿದ್ದಾರೆಯೆ ಅಥವಾ ಸತ್ತಿದ್ದಾರೆಯೆ ಎಂದು ಪರೀಕ್ಷಿಸುವ ಸಾಂಪ್ರದಾಯಿಕ ಮಾರ್ಗವೆಂದರೆ ಮೂಗನ್ನು ಪರೀಕ್ಷಿಸುವುದು. ಕಣ್ಣಿನ ಗುಡ್ಡೆಯನ್ನೋ ಅಥವಾ ಮತ್ತಿನ್ನೇನನ್ನೋ ಯಾರೂ ಪರೀಕ್ಷಿಸುತ್ತಿರಲಿಲ್ಲ. ಮೂಗು ತಣ್ಣಗಾಗಿದ್ದರೆ, ವ್ಯಕ್ತಿ ಸತ್ತಿದ್ದಾನೆಂದು ಅವರು ತೀರ್ಮಾನಿಸುತ್ತಿದ್ದರು.

ಸತ್ತ ನಂತರದ 48 ರಿಂದ 64 ನಿಮಿಷಗಳ ಮಧ್ಯದಲ್ಲಿ, “ಪ್ರಾಣ" ನಿರ್ಗಮಿಸುತ್ತದೆ. 6 ರಿಂದ 12 ಗಂಟೆಗಳ ಮಧ್ಯದಲ್ಲಿ "ಉದಾನ" ಹೊರಹೋಗುತ್ತದೆ. ಉದಾನ ಹೊರಹೋಗುವುದಕ್ಕೆ ಮುನ್ನ ಶರೀರವನ್ನು ಪುನಶ್ಚೇತನಗೊಳಿಸಬಹುದಾದ ತಾಂತ್ರಿಕ ಪ್ರಕ್ರಿಯೆಗಳಿವೆ. ಒಮ್ಮೆ ಉದಾನ ಹೊರಹೋಯಿತೆಂದರೆ, ಶರೀರವನ್ನು ಪುನಶ್ಚೇತನಗೊಳಿಸುವುದು ಅಸಾಧ್ಯ. ನಂತರ, 8 ರಿಂದ 18 ಗಂಟೆಗಳ ನಡುವೆ, "ಅಪಾನ" ನಿರ್ಗಮಿಸುತ್ತದೆ. ತರುವಾಯ, ಪ್ರಾಣದ ಸಂರಕ್ಷಕ ಸ್ವರೂಪವಾದ "ವ್ಯಾನ" ಹೊರಹೋಗಲು ಆರಂಭಿಸುತ್ತದೆ. ಮರಣವು ಸಹಜವಾಗಿ ಸಂಭವಿಸಿದ್ದರೆ, 11 ರಿಂದ 14 ದಿನಗಳವರೆಗೂ ಇದು ಮುಂದುವರಿಯಬಹುದು - ಮುದಿತನದಿಂದಾಗಿ ಒಬ್ಬ ವ್ಯಕ್ತಿಯು ಸತ್ತಿದ್ದರೆ ಹೀಗಾಗುತ್ತದೆ, ಏಕೆಂದರೆ, ಅಂತಹವರ ಜೀವ ದುರ್ಬಲವಾಗಿರುತ್ತದೆ. ಹಾಗಾಗಿ 11 ರಿಂದ 14 ದಿನಗಳವರೆಗೆ, ಕೆಲವು ಪ್ರಕ್ರಿಯೆಗಳು ದೇಹದಲ್ಲಿ ಮುಂದುವರಿಯುತ್ತದೆ; ಜೀವದ ಕೆಲ ಅಂಶ ಇನ್ನೂ ಉಳಿದಿರುತ್ತದೆ. ಆದರೆ ಜೀವ ಇನ್ನೂ ಹುರುಪಿನಿಂದ ಮಿಡಿಯುತ್ತಿರುವಾಗಲೇ ಯಾರಾದರೂ ಅಪಘಾತದಿಂದ ಸತ್ತರೆ, ಅವರ ಶರೀರವು ಸಂಪೂರ್ಣವಾಗಿ ನಾಶವಾಗದ ಹೊರತು, ಅವರು ಸತ್ತ 48 ರಿಂದ 90 ದಿನಗಳವರೆಗೂ ಆ ಜೀವದ ಕಂಪನಗಳು ಮುಂದುವರಿಯುತ್ತಿರುತ್ತವೆ.  

ನೀವು ಆ ಸಮಯದಲ್ಲಿ, ಆ ಜೀವಕ್ಕಾಗಿ ಮಾಡಬಹುದಾದ ಕೆಲ ವಿಷಯಗಳಿವೆ. ನಿಮ್ಮ ಅನುಭವದಲ್ಲಿ ಸಾವು ಎಂದರೆ ಯಾರೋ ಹೊರಟುಹೋದರು ಎನ್ನುವುದಾಗಿದೆ. ಆದರೆ ಹೋದ ಆ ಜೀವದ ಅನುಭವದ ಪ್ರಕಾರ ಸಾವು ಎನ್ನುವುದು ತಾನು ಶರೀರದಿಂದ ಹೊರಹೋಗಿರುವುದಷ್ಟೇ ಆಗಿರುತ್ತದೆ. ಅವರು ತಮ್ಮ ಶರೀರದಿಂದ ನಿರ್ಗಮಿಸಿದ ಮೇಲೆ, ನಿಮಗೆ ಅವರೊಂದಿಗೆ ಯಾವ ವ್ಯವಹಾರವು ಉಳಿದಿರುವುದಿಲ್ಲ. ನಿಮಗೆ ಅವರನ್ನು ಗುರುತಿಸುವುದಕ್ಕೂ ಸಾಧ್ಯವಾಗುವುದಿಲ್ಲ, ಮತ್ತು ಅವರೇನಾದರು ಮರಳಿ ಬಂದರೆ, ನೀವು ಭಯಭೀತರಾಗುತ್ತೀರಿ. ನೀವು ಪ್ರೀತಿಸಿದವರು ಸತ್ತ ನಂತರ ಬದುಕಿ ಬಂದರೆ, ಅಲ್ಲಿ ಪ್ರೀತಿ ಇರುವುದಿಲ್ಲ, ಭಯವಿರುತ್ತದೆ, ಏಕೆಂದರೆ ನಿಮ್ಮ ಸಂಬಂಧವು ಅವರ ಶರೀರದೊಂದಿಗಿರುತ್ತದೆ ಅಥವಾ ಅವರ ಜಾಗೃತ ಮನಸ್ಸು ಮತ್ತು ಭಾವನೆಯೊಂದಿಗಿರುತ್ತದೆ. ಒಮ್ಮೆ ಯಾರಾದರೂ ಸತ್ತರೆಂದರೆ, ಅವರು ಈ ಎರಡೂ ಅಂಶಗಳನ್ನು ಕಳೆದುಕೊಳ್ಳುತ್ತಾರೆ.

ಮರಣಾನಂತರ ವಿವೇಚನೆಯು ಸಂಪೂರ್ಣವಾಗಿ ಕಳೆದುಹೋಗುತ್ತದೆ. ಹೀಗಿದ್ದಾಗ, ನೀವು ಮನಸ್ಸಿನಲ್ಲಿ ಯಾವ ಗುಣವನ್ನು ಹಾಕುತ್ತೀರೋ ಅದು ಲಕ್ಷಪಟ್ಟು ಹೆಚ್ಚಾಗುತ್ತದೆ.

ಮನಸ್ಸು ಎನ್ನುವುದು ಸ್ವಾಭಾವಿಕ ಪ್ರವೃತ್ತಿಗಳನ್ನು ಹೊಂದಿರುವ ಒಂದು ಮಾಹಿತಿಯ ರಾಶಿ. ಇದು ಒಂದು ನಿರ್ದಿಷ್ಟ ರೀತಿಯಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. ಯಾರಾದರೂ ಸತ್ತರೆ, ಅವರು ತಮ್ಮ ವಿವೇಚನಾಶಕ್ತಿ ಹಾಗೂ ಬುದ್ಧಿಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ನೀವು ಅವರ ಮನಸ್ಸಿನಲ್ಲಿ ಒಂದು ಹನಿಯಷ್ಟು ಉಲ್ಲಾಸವನ್ನು ಹಾಕಿದರೆ, ಆ ಉಲ್ಲಾಸ ಲಕ್ಷ ಪಟ್ಟು ಹೆಚ್ಚಾಗುತ್ತದೆ. ಅದೇ ನೀವು ಒಂದು ಹನಿಯಷ್ಟು ಅಹಿತವನ್ನು ಹಾಕಿದರೆ, ಆ ಅಹಿತಕರತೆಯು ಲಕ್ಷ ಪಟ್ಟು ಹೆಚ್ಚಾಗುತ್ತದೆ. ಇದು ಸ್ವಲ್ಪ, ಮಕ್ಕಳೊಂದಿಗೆ ಹೇಗಿರುತ್ತದೆಯೋ ಹಾಗೆ – ಮಕ್ಕಳು ಅತಿಯಾಗಿ ಆಯಾಸವಾಗುವವರೆಗೂ ಆಟವಾಡುತ್ತಾರೆ, ಏಕೆಂದರೆ ಆಟವನ್ನು ಯಾವಾಗ ನಿಲ್ಲಿಸಬೇಕು ಎನ್ನುವ ಅಗತ್ಯವಾದ ವಿವೇಚನೆ ಅವರಿಗಿರುವುದಿಲ್ಲ.

ಮರಣಾನಂತರ ವಿವೇಚನೆಯು ಸಂಪೂರ್ಣವಾಗಿ ಕಳೆದುಹೋಗುತ್ತದೆ. ಹೀಗಿದ್ದಾಗ, ನೀವು ಮನಸ್ಸಿನಲ್ಲಿ ಯಾವ ಗುಣವನ್ನು ಹಾಕುತ್ತೀರೋ ಅದು ಲಕ್ಷಪಟ್ಟು ಹೆಚ್ಚಾಗುತ್ತದೆ. ಇದನ್ನೇ ಸ್ವರ್ಗ ಮತ್ತು ನರಕವೆಂದು ಹೇಳಲಾಗುವುದು. ನೀವೊಂದು ಉಲ್ಲಾಸಭರಿತ ಸ್ಥಿತಿಗೆ ತಲುಪಿದರೆ, ಅದನ್ನು ಸ್ವರ್ಗ ಎನ್ನಲಾಗುತ್ತದೆ. ನೀವೊಂದು ಅಹಿತಕರವಾದ ಸ್ಥಿತಿಗೆ ತಲುಪಿದರೆ, ಅದನ್ನು ನರಕ ಎನ್ನಲಾಗುತ್ತದೆ. ಇವುಗಳು ಭೌಗೋಳಿಕವಾದ ಸ್ಥಳಗಳಲ್ಲ – ದೇಹವನ್ನು ಕಳೆದುಕೊಂಡವರು ಅನುಭವಿಸುತ್ತಿರುವ ನಿಜಸ್ಥಿತಿಗಳು.
 

ಶ್ರಾದ್ಧದ ವಿಧಿಗಳು

ಇದನ್ನು ಇಂದು ಎಷ್ಟು ಸರಿಯಾಗಿ ಅಥವಾ ಎಷ್ಟು ಹಾಸ್ಯಾಸ್ಪದವಾಗಿ ಮಾಡಲಾಗುತ್ತಿದೆ ಎನ್ನುವುದು ಬೇರೆಯೇ ವಿಷಯ, ಆದರೆ ವಿವಿಧ ಹಂತಗಳಲ್ಲಿ ಏನೇನು ಮಾಡಬೇಕೆಂಬುದರ ಬಗ್ಗೆ ಒಂದಿಡೀ ವಿಜ್ಞಾನವೇ ಇದೆ. ಯಾರಾದರೂ ಸಾವನ್ನಪ್ಪಿದಾಗ, ಸಾಂಪ್ರದಾಯಿಕವಾಗಿ ಜನರು ಮಾಡುವ ಮೊದಲ ವಿಷಯವೆಂದರೆ ಸತ್ತ ಶರೀರದ ದೊಡ್ಡ ಕಾಲ್ಬೆರಳುಗಳನ್ನು ಒಟ್ಟಿಗೆ ಕಟ್ಟುವುದು. ಇದು ಬಹಳ ಮುಖ್ಯ – ಈ ರೀತಿ ಮಾಡುವುದು ಮೂಲಾಧಾರವನ್ನು ಬಿಗಿಯಾಗಿಸಿ ಆ ಜೀವವು ಮತ್ತೊಮ್ಮೆ ಶರೀರದೊಳಗೆ ಪ್ರವೇಶಿಸದಂತೆ ತಡೆಯುತ್ತದೆ. "ನಾನು ಈ ಶರೀರವಲ್ಲ" ಎಂಬ ಅರಿವಿಲ್ಲದೆಯೇ ಜೀವಿಸಿದಂತಹ ಜೀವವು ದೇಹದ ಯಾವುದಾದರೊಂದು ದ್ವಾರದ ಮೂಲಕ ಒಳನುಸುಳಲು ಪ್ರಯತ್ನಿಸುತ್ತಿರುತ್ತದೆ, ವಿಶೇಷವಾಗಿ ಮೂಲಾಧಾರದ ಮೂಲಕ. ಜೀವ ಹುಟ್ಟುವುದು ಮೂಲಾಧಾರದಿಂದ, ಮತ್ತು ಶರೀರವು ತಣ್ಣಗಾಗುತ್ತಿರುವಾಗ, ಕೊನೆಯದಾಗಿ ತಣ್ಣಗಾಗುವ ಬಿಂದುವೂ ಸಹ ಮೂಲಾಧಾರವೇ ಆಗಿದೆ.

ಯಾರಾದರೂ ಸತ್ತಾಗ, ಸಾಂಪ್ರದಾಯಿಕವಾಗಿ ಶರೀರವನ್ನು ಒಂದೂವರೆಯಿಂದ ಗರಿಷ್ಠ ನಾಲ್ಕು ಗಂಟೆಗಳೊಳಗಾಗಿ ಸುಡಬೇಕೆಂದು ಏಕೆ ಹೇಳುತ್ತಿದ್ದರೆಂದರೆ, ಆ ಸಮಯದಲ್ಲಿ ಜೀವವು ಮರಳಿ ಶರೀರದೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುತ್ತದೆ. ದೇಹವನ್ನು ಆದಷ್ಟು ಬೇಗ ಸುಡುವುದು ಅವರ ಪ್ರೀತಿಪಾತ್ರರ ಹಿತದೃಷ್ಟಿಯಿಂದಲೂ ಸಹ ಮುಖ್ಯವಾಗುತ್ತದೆ. ನಿಮ್ಮ ಹತ್ತಿರದವರು ಸತ್ತಾಗ, ನಿಮ್ಮ ಮನಸ್ಸು ಇಲ್ಲಸಲ್ಲದ ಕಲ್ಪನೆಗಳನ್ನು ಮಾಡಿಕೊಳ್ಳಲು ಆರಂಭಿಸಬಹುದು - ಒಂದು ಪವಾಡವಾಗಬಹುದೇನೋ, ದೇವರು ಬಂದು ಸತ್ತವರನ್ನು ಬದುಕಿಸಬಹುದೇನೋ ಎಂದೆಲ್ಲಾ ಅದು ಯೋಚಿಸುತ್ತಿರುತ್ತದೆ. ಆ ರೀತಿಯಾದ ಪವಾಡಗಳು ಯಾರಿಗೂ ಆಗಿಲ್ಲ, ಆದರೂ ಆ ಸತ್ತ ವ್ಯಕ್ತಿಗಾಗಿ ನಿಮ್ಮಲ್ಲಿರುವ ಭಾವನೆಗಳ ಕಾರಣದಿಂದಾಗಿ ಮನಸ್ಸು ಹೇಗೇಗೋ ಆಡುತ್ತದೆ. ಅಂತೆಯೇ, ಶರೀರದಿಂದ ಹೊರಹೋಗಿರುವ ಜೀವವೂ ಸಹ ತಾನಿನ್ನೂ ಶರೀರದೊಳಗೆ ಬರಬಹುದೆಂದು ನಂಬಿಕೊಂಡಿರುತ್ತದೆ.

ಹೇಗಾದರೂ ಮಾಡಿ ಒಂದು ಸಣ್ಣ ಮಾಧುರ್ಯದ ಹನಿಯನ್ನು ಇಂತಹ ವಿವೇಚನಾರಹಿತ ಮನಸ್ಸಿನಲ್ಲಿ ಹಾಕುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಅನೇಕ ವಿಧಿವಿಧಾನಗಳಿವೆ.

ಹಾಗಾಗಿ, ನೀವಿಂತಹ ನಾಟಕವನ್ನು ನಿಲ್ಲಿಸಬೇಕೆಂದರೆ, ವ್ಯಕ್ತಿಯು ಸತ್ತ ಒಂದು–ಒಂದೂವರೆ ಗಂಟೆಯೊಳಗೆ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಬೇಕು. ಆ ವ್ಯಕ್ತಿ ನಿಜವಾಗಿಯೂ ಸತ್ತಿದ್ದಾನೆಂದು ಖಚಿತಪಡಿಸಿಕೊಳ್ಳಲು ಈ ಸಮಯವನ್ನು ನಾಲ್ಕು ಗಂಟೆಗಳವರೆಗೆ ವಿಸ್ತರಿಸಿದ್ದಾರೆ. ಆದರೆ ಸಾಧ್ಯವಾದಷ್ಟು ಬೇಗ ಶರೀರವನ್ನು ತೆಗೆದುಕೊಂಡು ಹೋಗಬೇಕು. ಕೃಷಿ ಸಮುದಾಯಗಳಲ್ಲಿ ಸತ್ತ ದೇಹವನ್ನು ಹೂಳಲಾಗುತ್ತಿತ್ತು. ಮಣ್ಣಿನ ಒಂದು ತುಣುಕಾದ ಶರೀರವು, ಅವರನ್ನು ಪಾಲಿಸಿ ಪೋಷಿಸಿದ ಮಣ್ಣಿಗೇ ಮರಳಿ ಹೋಗಬೇಕೆಂಬ ಕಾರಣದಿಂದಾಗಿ ಅವರು ದೇಹಗಳನ್ನು ತಮ್ಮ ನೆಲದಲ್ಲಿಯೇ ಹೂಳುತ್ತಿದ್ದರು. ಇಂದು ನಿಮ್ಮ ಆಹಾರವನ್ನು ನೀವು ಅಂಗಡಿಗಳಿಂದ ಖರೀದಿಸುತ್ತೀರಿ, ಮತ್ತು ಅದು ಎಲ್ಲಿಂದ ಬಂದಿದೆಯೆಂದು ನಿಮಗೆ ತಿಳಿದಿರುವುದಿಲ್ಲ. ಹಾಗಾಗಿ, ಹೂಳುವುದು ಈಗ ಸೂಕ್ತವಾಗಿ ಉಳಿದಿಲ್ಲ. ಹಿಂದಿನ ಕಾಲದಲ್ಲಿ, ತಮ್ಮದೇ ಭೂಮಿಯಲ್ಲಿ ಹೆಣವನ್ನು ಹೂತುಹಾಕುವಾಗ, ಯಾವಾಗಲೂ ಉಪ್ಪು ಮತ್ತು ಅರಿಶಿನವನ್ನು ಅದರ ಮೇಲೆ ಹಾಕುತ್ತಿದ್ದರು. ಇವು ಶರೀರವನ್ನು ಬೇಗ ಕರಗಿಸುವಲ್ಲಿ ನೆರವಾಗುತ್ತಿದ್ದವು. ಶವವನ್ನು ಸುಡುವುದು ಹೆಚ್ಚು ಉತ್ತಮವಾಗಿದೆ, ಏಕೆಂದರೆ ಅದು ಕಥೆಯನ್ನು ಒಂದೇ ಬಾರಿಗೆ ಮುಗಿಸುತ್ತದೆ. ಕುಟುಂಬದಲ್ಲಿ ಸಾವಾದಾಗ, ಜನರು ಅಳುವುದು, ಗೋಳಾಡುವುದನ್ನು ನೀವು ನೋಡಿರಬಹುದು. ಆದರೆ ಶವದಹನವಾದ ಕೂಡಲೆ ಅವರು ಶಾಂತವಾಗುತ್ತಾರೆ, ಏಕೆಂದರೆ ಸತ್ತವರು ಇನ್ನಿಲ್ಲವೆಂಬ ಸತ್ಯ ಅವರ ಅರಿವಿಗೆ ಬರುತ್ತದೆ. ಇದು ಕೇವಲ ಬದುಕಿರುವವರ ಅರಿವಿಗಷ್ಟೇ ಅಲ್ಲ, ಶರೀರವನ್ನು ಕಳೆದುಕೊಂಡವರ ಅರಿವಿಗೂ ಸಹ ಬರುತ್ತದೆ. ಶರೀರವು ಇರುವವರೆಗೆ, ತಾವು ಪುನಃ ಆ ಶರೀರದೊಳಗೆ ಹೋಗಬಹುದೆಂಬ ಭ್ರಮೆಯಲ್ಲಿ ಅವರಿರುತ್ತಾರೆ.

ಹೇಗಾದರೂ ಮಾಡಿ ಒಂದು ಸಣ್ಣ ಮಾಧುರ್ಯದ ಹನಿಯನ್ನು ಇಂತಹ ವಿವೇಚನಾರಹಿತ ಮನಸ್ಸಿನಲ್ಲಿ ಹಾಕಿ, ಆ ಮಾಧುರ್ಯವು ಹಲವು ಪಟ್ಟು ಹೆಚ್ಚಾಗಿ, ಸತ್ತವರು ತಮ್ಮ ಸ್ವಯಂಪ್ರೇರಿತ ಸ್ವರ್ಗದಲ್ಲಿ ಆರಾಮವಾಗಿರಲಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಅನೇಕ ವಿಧಿವಿಧಾನಗಳಿವೆ. ಮೇಲೆ ಹೇಳಿರುವ ವಿಧಿಗಳೇ ಇದರ ಉದ್ದೇಶ - ಅವುಗಳನ್ನು ಸರಿಯಾದ ರೀತಿಯಲ್ಲಿ ಮಾಡಿದಲ್ಲಿ..!

ಋಣಾನುಬಂಧ

ನಿಮ್ಮಲ್ಲಿ ಹೆಚ್ಚಿನವರು ಭೌತಿಕ ಸಂಬಂಧವನ್ನು ಸೂಚಿಸುವ ಋಣಾನುಬಂಧದ ಬಗ್ಗೆ ಕೇಳಿರುತ್ತೀರಿ. ನೀವು ಯಾರನ್ನಾದರೂ ಮುಟ್ಟಿದಾಗ - ಅದು ರಕ್ತ ಸಂಬಂಧದ ಕಾರಣದಿಂದಾಗಲಿ ಅಥವಾ ಲೈಂಗಿಕ ಸಂಬಂಧದ ಕಾರಣದಿಂದಾಗಲಿ, ಅಥವಾ ನೀವು ಯಾರ ಕೈಗಳನ್ನಾದರು ಹಿಡಿದುಕೊಂಡರೆ ಅಥವಾ ಬಟ್ಟೆಗಳನ್ನು ವಿನಿಮಯ ಮಾಡಿಕೊಂಡರೂ - ಈ ಎರಡು ಶರೀರಗಳು ಒಂದು ಸಮಾನ ಗುಣದ ಋಣಾನುಬಂಧವನ್ನು ಸೃಷ್ಟಿಸುತ್ತವೆ. ಯಾರಾದರೂ ಸತ್ತಾಗ, ಸಾಂಪ್ರದಾಯಿಕವಾಗಿ, ಋಣಾನುಬಂಧವನ್ನು ಸಂಪೂರ್ಣವಾಗಿ ಹೇಗೆ ನಾಶಮಾಡುವುದು ಎಂದು ನೀವು ನೋಡುತ್ತಿರುತ್ತೀರಿ. ಸತ್ತವರೊಂದಿಗೆ ನೀವು ಋಣಾನುಬಂಧವನ್ನು ಬೆಳೆಸಿಕೊಳ್ಳಬಾರದೆಂಬ ಕಾರಣಕ್ಕಾಗಿಯೇ ಶವದ ಬೂದಿಯನ್ನು ಗಂಗೆಯಲ್ಲೋ ಅಥವಾ ಸಮುದ್ರದಲ್ಲೋ ಹಾಕಿ, ಅದನ್ನು ಸಾಧ್ಯವಾದಷ್ಟು ಚದುರಿ ಹೋಗುವಂತೆ ಮಾಡಲಾಗುತ್ತಿತ್ತು. ನೀವು ನಿಮ್ಮ ಜೀವನವನ್ನು ಮುಂದುವರಿಸಬೇಕೆಂದರೆ, ಆ ಋಣಾನುಬಂಧವನ್ನು ಸರಿಯಾಗಿ ಕಡಿದುಹಾಕಬೇಕು. ಇಲ್ಲದಿದ್ದರೆ, ಇದು ನಿಮ್ಮ ಭೌತಿಕ ಮತ್ತು ಮಾನಸಿಕ ರಚನೆಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಆಧುನಿಕ ಸಮಾಜದಲ್ಲಿ ಹೀಗಾಗುತ್ತಿರುವುದನ್ನು ನಾವೀಗಾಗಲೇ ನೋಡುತ್ತಿದ್ದೇವೆ. ಎಂಟು ವರ್ಷದವರೆಗೆ ಮಕ್ಕಳು ಈ ವಿಷಯಗಳಿಂದ ಪ್ರತಿರಕ್ಷಿತವಾಗಿರುತ್ತಾರೆ. ಪ್ರಕೃತಿಯು ಅವರಿಗೆ ಆ ರಕ್ಷಣೆಯನ್ನೊದಗಿಸಿದೆ. ಆದರೆ ಸತ್ತವರಿಗೆ ನಾವು ಸರಿಯಾದ ವ್ಯವಸ್ಥೆಯನ್ನು ಕಲ್ಪಿಸದಿದ್ದರೆ, ಹದಿಹರೆಯದವರು ಬಹಳವಾಗಿ ಕಷ್ಟಪಡುತ್ತಾರೆ. ಶರೀರವನ್ನು ಕಳೆದುಕೊಂಡವರ ಶಕ್ತಿ ಸದಾ ಕಾಲ ಇರುತ್ತದೆ ಮತ್ತು ಅವರು ಮೊದಲು ಬೆನ್ನಟ್ಟುವುದು ಅತ್ಯಂತ ದುರ್ಬಲ ಹಂತದಲ್ಲಿರುವ ಹದಿಹರೆಯದವರನ್ನು. ಇಂದಿನ ಜಗತ್ತಿನಲ್ಲಿ ಹದಿಹರೆಯದವರು ಎಂತಹ ಏರುಪೇರುಗಳನ್ನು ಎದುರಿಸುತ್ತಿದ್ದಾರೆಂಬುದನ್ನು ನೀವೇ ನೋಡುತ್ತಿದ್ದೀರಿ.

ಹಿಂದಿನ ತಲೆಮಾರಿಗೆ ಹೋಲಿಸಿದಲ್ಲಿ ಇಂದಿನ ಹದಿಹರೆಯವು ಏಕಿಷ್ಟು ಕಷ್ಟಕರವಾಗಿದೆ ಎನ್ನುವುದಕ್ಕೆ ಒಂದು ಕಾರಣವಿದು – ಏನೆಂದರೆ ನಾವು ಸತ್ತವರನ್ನು ಸರಿಯಾಗಿ ನೋಡಿಕೊಳ್ಳದ್ದೇ ಇರುವುದರಿಂದ ಈ ಋಣಾನುಬಂಧಗಳು ಅಸ್ತವ್ಯಸ್ತವಾಗಿವೆ. ಅದೊಂದು ರೀತಿಯ ಹಿಡಿತವಿಲ್ಲದ ಸಾಫ್ಟ್‌ವೇರ್ ಇದ್ದ ಹಾಗೆ, ಮತ್ತದು ಯಾವಾಗಲೂ ಹದಿಹರೆಯದವರನ್ನು ಹೆಚ್ಚಾಗಿ ಬಾಧಿಸುತ್ತದೆ.

ಪ್ರಶ್ನೆ: ಹಾಗಾದರೆ ನಾವೇನು ಮಾಡಬೇಕು? ನಮ್ಮ ಭಾವನೆಗಳನ್ನು ಪುಡಿಪುಡಿ ಮಾಡಿ ಅವುಗಳನ್ನು ಚದುರಿಸುವುದು ಹೇಗೆ? ಭಾವನೆಗಳನ್ನು ಅಷ್ಟು ಸುಲಭವಾಗಿ ಕತ್ತರಿಸಿಹಾಕಲು ಸಾಧ್ಯವಿದೆಯೆಂದು ನನಗನಿಸುವುದಿಲ್ಲ.

ಸದ್ಗುರು: ಭಾವನೆಗಳ ವಿಷಯ ಬೇರೆ. ಅವು ಜೀವನದ ಎರಡನೆಯ ಅಂಶ. ನೀವು ತೊಡೆದುಹಾಕಬೇಕಿರುವುದು ಸತ್ತವರೊಂದಿಗಿನ ಋಣಾನುಬಂಧವನ್ನು. ಏಕೆಂದರೆ, ಅದು ಬೇರೆ ವಿಷಯಗಳ ಜೊತೆಗೆ, ದೈಹಿಕ ಮತ್ತು ಮಾನಸಿಕ ಅವ್ಯವಸ್ಥೆಗಳಿಗೂ ಕಾರಣವಾಗಬಹುದು. ಭಾವನೆಗಳು ಸ್ವತಃ ತಾವೇ ಹಾನಿಕರವಲ್ಲ. ನಿಮಗೆ ಯಾರೊಂದಿಗಾದರೂ ಸುಂದರವಾದ ಸಂಬಂಧವಿದ್ದು, ಅಂತಹವರು ಈಗ ಸತ್ತು ಹೋಗಿದ್ದರೆ, ಆ ಸಂಬಂಧದ ಸುಂದರತೆಯನ್ನು ಕಾಪಾಡಿಕೊಳ್ಳುವುದು ಆರೋಗ್ಯಕರ ವಿಷಯವೇ. ಆದರೆ, ಋಣಾನುಬಂಧವಿದ್ದರೆ, ಅದು ನಿಮ್ಮ ಶರೀರ ಮತ್ತು ಮಾನಸಿಕ ರಚನೆಯನ್ನು ದುರ್ಬಲಗೊಳಿಸುತ್ತದೆ. ಯಾವ ರೀತಿಯಲ್ಲಿ ಎಂದರೆ, ನಿಮ್ಮಿಬ್ಬರ ನಡುವೆ ಘಟಿಸಿದ ಸುಂದರವಾದ ವಿಷಯಗಳನ್ನು ಕಾಪಾಡಿಕೊಳ್ಳುವ ಬದಲು ನೀವು ಯಾತನೆಯನ್ನು ಅನುಭವಿಸುತ್ತೀರಿ. ಅದು ಮಾತ್ರವಲ್ಲ - ಇದು ನಿಮ್ಮ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ. ಇದನ್ನು ತಪ್ಪಿಸಲು, ನಾವು ಕೇವಲ ಭೌತಿಕ ನೆನಪನ್ನು ಮಾತ್ರ ನಾಶ ಮಾಡಲು ಪ್ರಯತ್ನಿಸುತ್ತೇವೆ. ಭಾವನಾತ್ಮಕ ಮತ್ತು ಮಾನಸಿಕ ನೆನಪನ್ನು ಮರೆಯಲು ಸಾಧ್ಯವಿಲ್ಲ, ಹೌದು, ನೀವು ಅವುಗಳನ್ನು ಮರೆಯಬಾರದು ಕೂಡ. ನಿಮ್ಮ ಜೀವನಕ್ಕೆ ಅಷ್ಟು ಮುಖ್ಯವಾದವರು - ಅವರನ್ನು ನೀವು ಮರೆಯಬೇಕೇಕೆ? ಆ ಸಂಬಂಧವನ್ನು ನೀವು ಸದಾ ಕಾಲ ಕಾಪಾಡಿಕೊಳ್ಳಬೇಕು.

ಸಂಪಾದಕರ ಟಿಪ್ಪಣಿ: ಕಾಯಂತಸ್ಥಾನಮ್ ಎನ್ನುವುದು ಈಶಾದ ಅಂತ್ಯಸಂಸ್ಕಾರದ ಸೇವೆಯಾಗಿದ್ದು, ಇದು ಪುರಾತನ ಸಂಪ್ರದಾಯಗಳು ಮತ್ತು ಶ್ರಾದ್ಧದ ಆಚರಣೆಗಳನ್ನು ಪ್ರಬಲವಾದ ಶಕ್ತಿಯ ಆಧಾರದೊಂದಿಗೆ ಪುನರೂರ್ಜಿತಗೊಳಿಸುತ್ತಿದೆ. ಇದನ್ನೊಂದು ವಾಣಿಜ್ಯ ಉದ್ಯಮವಾಗಿ ನೋಡದೆ, ಸೇವೆಯ ಭಾವದಿಂದ ನಡೆಸಲಾಗುತ್ತಿದೆ. ಹೆಚ್ಚಿನ ಜನರಿಗೆ ಈ ಸೇವೆಯನ್ನು ಒದಗಿಸಲು ನಮಗೆ ಸಹಾಯ ಮಾಡಲು ನಿಮ್ಮ ಬೆಂಬಲ ಮತ್ತು ಕಾಣಿಕೆಯನ್ನು ನಾವು ಕೋರುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಕಾಯಂತಸ್ಥಾನಮ್ - ಈಶಾದ ಅಂತ್ಯಸಂಸ್ಕಾರ ಸೇವೆಯ ಪುಟವನ್ನು ನೋಡಿ. Kayantha Sthanam – Isha’s Cremation Services.